ಉಡುಪಿ(ಸೆ.26): ಅದು ಆಕೆಯ ಪಾಲಿಗೆ ಅತ್ಯಂತ ನಿರೀಕ್ಷೆಯ ಕ್ಷಣ. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾದ ನಿರ್ವಾಣದ 41 ನೇ ದಿನ. ಅಮಂಗಳವೆಂದು ಎಲ್ಲರಿಂದಲೂ ಅವಗಣನೆಗೆ ಒಳಗಾದ ಜೀವವೊಂದು ಮಂಗಳಮುಖಿಯಾದ ಸಂಭ್ರಮ ಅಲ್ಲಿತ್ತು. ಉಡುಪಿಯಲ್ಲಿ ಗಂಡೊಬ್ಬ ಹೆಣ್ಣಾಗಿ ಹೊಸ ಬದುಕು ಪ್ರಾರಂಭಿಸಿದ ನಿರ್ವಾಣ ಆಚರಣೆಯ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.

Add Asianetnews Kannada as a Preferred SourcegooglePreferred

ಇಂತವರ ಬದುಕಲ್ಲಿ ಸಂತಸ ತುಂಬಾ ಅಪರೂಪ. ದೇಹಕ್ಕೂ ಭಾವಕ್ಕೂ ಸಂಬಂಧವೇ ಇಲ್ಲದ ಜೀವಕ್ಕೆ ಇದಕ್ಕಿಂತ ಸಂಭ್ರಮದ ದಿನ ಬೇರೊಂದಿಲ್ಲ. ಉಡುಪಿಯ ಕಾರ್ಕಳದ ಸುಭಾಷ್‌ಗೆ ತನ್ನಲ್ಲಿರುವ ಹೆಣ್ತನದ ಅನುಭವವಾಗಿ ಬಹಳ ಕಾಲವಾಗಿತ್ತು.. ತಾನು ಹೆಣ್ಣಾಗಬೇಕೆಂದುಕೊಂಡಿದ್ದ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಕೊನೆಗೂ ಸುಭಾಷ್ ಲಾವಣ್ಯ ಆಗಿದ್ದಾಳೆ.

ಮಂಗಳಮುಖಿಯರ ಸಂಪ್ರದಾಯದಂತೆ ಮಲ್ಪೆಯಲ್ಲಿ ನಿರ್ವಾಣ ಪ್ರಕ್ರಿಯೆ ನಡೆಯಿತು. ನಾಡಿನ ಬೇರೆ ಬೇರೆ ಭಾಗಗಳಿಂದ ಸುಮಾರು 70ಕ್ಕೂ ಹೆಚ್ಚು ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಜರಾಥ್ ನ ಪೇತ್ ರಾಜ್ ಮಾತಾ ಮಂಗಳಮುಖಿಯರಿಗೆ ಆರಾಧ್ಯ ದೇವರು. ಆಕೆಯ ಫೋಟೋದ ಮುಂದೆನೇ ಎಲ್ಲಾ ಸಂಪ್ರದಾಯಗಳು ನಡೆಯುತ್ತೆ.. ಕರಾವಳಿ ಮಂಗಳಮುಖಿಯರ ಗುಂಪಿನ ಮುಖ್ಯಸ್ಥೆ ರಾಣಿ, ಲಾವಣ್ಯ ಪಾಲಿಗೆ ಅಜ್ಜಿ. 41 ದಿನ ಕತ್ತಲಕೋಣೆಯಲ್ಲಿ ಕಳೆದ ನಂತರ ದೇವರ ಪೂಜೆ ಮಾಡಿ, ಅರಿಶಿನ ಹಚ್ಚಿಕೊಂಡು, ಸಮುದ್ರಕ್ಕೆ ಹಾಲೆರೆದು ಬಂದ ಬಳಿಕ ಇವರಿಗೆ ಅಧಿಕೃತ ಮಾನ್ಯತೆ.

ಮಂಗಳಮುಖಿಯರ ಜೀವನದ ಭದ್ರತೆಗೆ ಹೀಗೊಂದು ಆಚರಣೆ, ತಮ್ಮದೇ ಗುಂಪಿನಲ್ಲಿ ಗುರುತಿಸಿಕೊಳ್ಳುವಿಕೆ ಅನಿವಾರ್ಯ. ಸರ್ಕಾರದ ಎಲ್ಲಾ ಬಗೆಯ ಸೌಲಭ್ಯ ವಂಚಿತ ಈ ಗುಂಪು ತಮ್ಮ ಅಸ್ತಿತ್ವಕ್ಕಾಗಿ ಇಂದಿಗೂ ಈ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡಿದೆ.