ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ಮತ್ತು ಪೀಠಾಪತಿಗಳಾಗಿರುವ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಅತ್ಯಾಚಾರ ಆರೋಪವಿದ್ದು, ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಿ ಆಡಳಿತಾಕಾರಿ ನೇಮಕ ಮಾಡುವಂತೆ ಕೋರಿ ಎಡುರ್ಕಳ ಈಶ್ವರಭಟ್ ಸೇರಿದಂತೆ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು(ನ.15): ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವವರು ಧಾರ್ಮಿಕ ಕೇಂದ್ರಗಳ ಪೀಠಾಪತಿ ಆಗಿರುವುದಕ್ಕೆ ಅನರ್ಹರಾಗಿದ್ದು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯವರನ್ನು ಪೀಠಾಪತಿ ಸ್ಥಾನದಿಂದ ಕೆಳಗಿಳಿಸುವುದೇ ಲೇಸು ಎಂದು ಹೈಕೋರ್ಟ್ ವೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ಮತ್ತು ಪೀಠಾಪತಿಗಳಾಗಿರುವ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಅತ್ಯಾಚಾರ ಆರೋಪವಿದ್ದು, ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಿ ಆಡಳಿತಾಕಾರಿ ನೇಮಕ ಮಾಡುವಂತೆ ಕೋರಿ ಎಡುರ್ಕಳ ಈಶ್ವರಭಟ್ ಸೇರಿದಂತೆ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠಾಪತಿಯಾಗಿರುವವರು ಧಾರ್ಮಿಕ ಕಟ್ಟುಪಾಡು ಮತ್ತು ಧಾರ್ಮಿಕ ಶ್ರದ್ಧೆಗಳಿಗೆ ಬದ್ಧರಾಗಿರಬೇಕು. ಆದ್ದರಿಂದ ಇಂಥ ಆರೋಪಗಳನ್ನು ಹೊತ್ತವರು ಪೀಠದಲ್ಲಿ ಮುಂದುವರಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಪೀಠ, ಅವರನ್ನು ಕೆಳಗಿಳಿಸುವುದೇ ಉತ್ತಮ ಎಂದಿತು.

ಈ ವೇಳೆ ಮಠದ ಭಕ್ತರ ಪರವಾಗಿ ವಾದ ಮಂಡಿಸಿದ ವಕೀಲರು, ಶ್ರೀಮಠದ ವಿರುದ್ಧ ವಿನಾಕರಣ ಆರೋಪ ಮಾಡುತ್ತಿದ್ದಾರೆ. ಆರೋಪ ಸಂಬಂಧ ಯಾವುದೇ ದಾಖಲೆಗಳಿಲ್ಲ. ಅಲ್ಲದೆ, ಈ ಅರ್ಜಿ ಸಿವಿಲ್ ವ್ಯಾಜ್ಯಕ್ಕೆ ಒಳಪಡುತ್ತದೆ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಪೀಠಾಪತಿಗಳಾಗಿರುವ ರಾಘವೇಶ್ವರ ಸ್ವಾಮೀಜಿ ಮಠದಲ್ಲಿ ಗಾಯಕಿ ಜತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಅೀನ ನ್ಯಾಯಾಲಯ ಹೇಳಿದೆ. ಹೀಗಿದ್ದರೂ ಪೀಠಾಪತಿಯಾಗಿ ಮುಂದುವರಿಯುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ಆದೇಶದ ಪ್ರತಿಯೊಂದಿಗೆ ವಿವರಿಸಿದರು.

ಹಣೆ ಚಚ್ಚಿಕೊಂಡರು: ವಾದ- ಪ್ರತಿವಾದದ ವೇಳೆ ಮಧ್ಯ ಪ್ರವೇಶಿಸಿದ ನ್ಯಾ. ಮುಖರ್ಜಿ, ಈ ಮಾಹಿತಿ ಕೇಳಿ ಹಣೆಗೆ ಕೈ ಇಟ್ಟು ‘‘ಛೀ ಛೀ ಛೀ ಅತ್ಯಾಚಾರ ಆರೋಪವಿರುವವರು ಹೇಗೆ ತಾನೆ ಮಠಾಪತಿಯಾಗಿ ಮುಂದುವರಿಯಲು ಸಾಧ್ಯ?’’ ಎಂದು ಪ್ರಶ್ನಿಸಿದರು. ಮೊದಲು ಪೀಠಾಪತಿ ಸ್ಥಾನದಿಂದ ಅವರನ್ನು ಕೆಳಗಿಳಿಸುವಂತೆ ವೌಖಿಕವಾಗಿ ಸರ್ಕಾರಕ್ಕೆ ಸೂಚಿಸಿದರು. ಬಳಿಕ ವಾದ ಮುಂದುವರಿಸಿದ ವಕೀಲರು, ಪೀಠಕ್ಕೆ ಆಡಳಿತಾಕಾರಿ ನೇಮಕ ಮಾಡುವಂತೆ ಕೋರಿ ಮುಖ್ಯಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿ ಸಂಬಂಧ ಕಳೆದ ತಿಂಗಳಲ್ಲಿ ವಿಚಾರಣೆ ನಡೆಸಲಾಗಿದೆ. ಮುಂದಿನ ವಿಚಾರಣೆ ಡಿ.14ಕ್ಕೆ ಮುಂದೂಡಲಾಗಿದೆ. ವಿನಾ ಕಾರಣ ವಿಚಾರಣೆಗೆ ವಿಳಂಬ ಮಾಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರಕ್ಕೆ ತರಾಟೆ

ಮಠಕ್ಕೆ ಆಡಳಿತಾಕಾರಿ ನೇಮಿಸುವ ಸಂಬಂಧದ ಅರ್ಜಿ ಇತ್ಯರ್ಥಪಡಿಸುವುದಕ್ಕೆ ಸರ್ಕಾರಕ್ಕೆ ಇನ್ನೂ ಎಷ್ಟು ಕಾಲಾವಕಾಶ ಬೇಕು ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅಲ್ಲದೆ, ಈ ಸಂಬಂಧ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದರು.

ರಾಘವೇಶ್ವರ ಶ್ರೀಗಳು ಮಠಾಪತಿಯಾಗಿ ಅನುಸರಿಸಬೇಕಾದ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಮಠದ ಹಣಕಾಸು ವ್ಯವಹಾರಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳಿವೆ. ಶ್ರೀಗಳು ತಮ್ಮ ನಡತೆಯಿಂದ ಮಠದ ಘನತೆ ಕುಗ್ಗಿಸಿದ್ದಾರೆ. ಸರ್ಕಾರ ಮಠದ ಅವ್ಯವಹಾರಗಳನ್ನು ಗಮನಿಸಿಯೂ ಕಣ್ಣು ಮುಚ್ಚಿ ಕುಳಿತಿದೆ. ನಾವು ಶ್ರೀಮಠದ ಅನನ್ಯ ಭಕ್ತರಾಗಿದ್ದು ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಯಲು ಕೂಡಲೇ ಆಡಳಿತಾಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎದುರ್ಕುಳ ಈಶ್ವರಭಟ್ ಸೇರಿದಂತೆ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ರೀತಿಯಲ್ಲಿ ವೌಖಿಕವಾಗಿ ಅಭಿಪ್ರಾಯಪಟ್ಟಿದ್ದಾರೆ.