‘ಪ್ರಧಾನಿಗಳೇ.. ಅವಧಿ ಮುಗಿಯುತ್ತಾ ಬಂದಿದೆ, ಮಾತು ಸಾಕು, ಕೆಲಸ ಶುರು ಮಾಡಿ’
- ಉದ್ಯಮಿಗಳ ಸಾಲ ಮನ್ನಾ ಮಾಡಲಾಗುತ್ತದೆ, ರೈತರ ಸಾಲ ಮನ್ನಾ ಯಾಕಿಲ್ಲ?
- ಉದ್ಯೋಗ ಸೃಷ್ಟಿಸುವಲ್ಲಿ, ಕಪ್ಪು ಹಣ ವಾಪಾಸು ತರುವಲ್ಲಿ, ದೇಶದ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಬಿಜೆಪಿ ವಿಫಲ
ಕೊಪ್ಪಳ: ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಇತಿಹಾಸದ ಬಗ್ಗೆ ಭಾಷಣ ಮಾಡುವುದನ್ನು ನಿಲ್ಲಿಸಿ, ಕೆಲಸ ಮಾಡಲು ಆರಂಭಿಸಿ. 5 ವರ್ಷಗಳಾಗುತ್ತಾ ಬಂದಿದೆ, ಹೆಚ್ಚು ಸಮಯ ಉಳಿದಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾವ್ಯಾವ ಕೆಲಸ ಮಾಡಿದ್ದೀರಿ ಎಂದು ದೇಶಕ್ಕೆ ತಿಳಿಸಬೇಕಾಗುತ್ತದೆ. ಆದರೆ ನೀವಿನ್ನು ಖಾತೆಯನ್ನೇ ತೆರೆದಿಲ್ಲ, ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮೋದಿಯು ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಿಂದಿನ ಆಗುಹೋಗುಗಳನ್ನು ಕೆದಕುತ್ತಾ, ಕಾಂಗ್ರೆಸ್ ಮೇಲೆ ದಾಳಿ ನಡೆಸುತ್ತಾರೆ ಎಂದಿರುವ ರಾಹುಲ್ ಗಾಂಧಿ, ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ, ಕಪ್ಪು ಹಣ ವಾಪಾಸು ತರುವಲ್ಲಿ, ದೇಶದ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ, ಎಂದು ಟೀಕಿಸಿದ್ದಾರೆ.
ನೀವು ಬಸವಣ್ಣನವರ ಹೆಸರನ್ನು ಆಗ್ಗಾಗೆ ಪ್ರಸ್ತಾಪಿಸುತ್ತೀರಿ. ಬಸವಣ್ಣನವರು ಕಾಯಕವೇ ಕೈಲಾಸವೆಂದಿದ್ದಾರೆ. ಆದರೆ ನೀವು ಕೇವಲ ಮಾತುಗಳನ್ನಾಡುತ್ತೀರಿ, ಕೆಲಸ ಮಾಡಲ್ಲ. ಮಾತನಾಡುವುದಿದ್ರೂ ಕೂಡಾ ಹಳೆಯ ವಿಷಯಗಳನ್ನೇ.. ಎಂದು ರಾಹುಲ್ ಹರಿಹಾಯ್ದಿದ್ದಾರೆ.
ಮೋದಿ ಸರ್ಕಾರವು ನಿಧಾನವಾಗಿ ಉದ್ಯಮಿಗಳ ಸುಮಾರು 10 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡುತ್ತಿದೆ, ಆದರೆ ರೈತರ ಸಾಲ ಮನ್ನಾ ಮಾಡಲ್ಲ, ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.