. ಕಡೂರು ಮತ್ತು ಬೆಳಗಾವಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಸಾಮೂಹಿಕ ನಕಲಿನಂತಹ ಪ್ರಕರಣಗಳನ್ನು ಹೊರತುಪಡಿಸಿದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಯಂತಹ ಯಾವುದೇ ಅಹಿತಕರ ಘಟನೆಗಳು ಎಲ್ಲೂ ನಡೆದಿಲ್ಲ.

ಬೆಂಗಳೂರು(ಏ.13): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಬುಧವಾರ ಮುಕ್ತಾಯಗೊಂಡಿದ್ದು, ಏ. 20ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಕೊನೆಯ ದಿನದ ಸಮಾಜ ವಿಜ್ಞಾನ ಪರೀಕ್ಷೆ ವೇಳೆ ಶಿವಮೊ​ಗ್ಗದಲ್ಲಿ ಒಬ್ಬ ವಿದ್ಯಾ​ರ್ಥಿ ಡಿಬಾರ್‌ ಆಗಿ​ದ್ದಾನೆ. ಉಳಿದಂತೆ ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆದಿದೆ.

Add Asianetnews Kannada as a Preferred SourcegooglePreferred

ಮಾ.30ರಿಂದ ಏ.12ರವರೆಗೆ ನಡೆದ ಎಲ್ಲಾ ಪರೀಕ್ಷೆಗಳೂ ಯಶಸ್ವಿಯಾಗಿ ನಡೆದಿವೆ. ಈ ಬಾರಿ 8.77 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕಡೂರು ಮತ್ತು ಬೆಳಗಾವಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಸಾಮೂಹಿಕ ನಕಲಿನಂತಹ ಪ್ರಕರಣಗಳನ್ನು ಹೊರತುಪಡಿಸಿದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಯಂತಹ ಯಾವುದೇ ಅಹಿತಕರ ಘಟನೆಗಳು ಎಲ್ಲೂ ನಡೆದಿಲ್ಲ. ಪರೀಕ್ಷಾ ಅಕ್ರಮ, ಸಾಮೂಹಿಕ ನಕಲು ಪ್ರಕರಣಗಳಲ್ಲಿ ಭಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಏ . 20ರಿಂದ ರಾಜ್ಯದ 225 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮೌಲ್ಯಮಾಪನ ಕಾರ್ಯಕ್ಕೆ 68567 ಶಿಕ್ಷಕರನ್ನು ನಿಯೋಜಿಸಲಾಗಿದೆ. ಪರೀಕ್ಷೆಯಂತೆ ಮೌಲ್ಯಮಾಪನ ಕಾರ್ಯವೂ ಸಮಯಯಕ್ಕೆ ಸರಿಯಾಗಿ ಯಶಸ್ವಿಯಾಗಿ ಪೂರ್ಣಗೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ತಿಳಿಸಿದ್ದಾರೆ.