ಅನ್ಯಾಯವಾದರೆ ತೆಲಂಗಾಣ ಮಾದರಿ ಹೋರಾಟ: ಶ್ರೀರಾಮುಲು
ತಾವೆಂದಿಗೂ ಕೂಡ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ರಾಜೀನಾಮೆಗೆ ಸಿದ್ಧರಾಗಿದ್ದೇನೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಎಂದಿಗೂ ಕೂಡ ಸಹಿಸುವುದಿಲ್ಲ. ಇನ್ನೊಂದು ತೆಲಂಗಾಣ ರೀತಿಯ ಹೋರಾಟಕ್ಕೂ ಕೂಡ ತಾವು ಸಿದ್ಧ ಎಂದು ಶ್ರೀ ರಾಮುಲು ಹೇಳಿದ್ದಾರೆ.
ಬೆಂಗಳೂರು : ಈ ಭಾರಿ ಉತ್ತರ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ತಾವು ರಾಜೀನಾಮೆಗೂ ಸಿದ್ಧ, ತಾವೆಂದಿಗೂ ಕೂಡ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡಿಲ್ಲ. ರಾಜಕೀಯ ನನಗೆ ಮುಖ್ಯವಲ್ಲ. ಜನರ ನೋವು ನನಗೆ ಮುಖ್ಯವಾಗಿದೆ ಎಂದು ಶ್ರೀ ರಾಮುಲು ಹೇಳಿದ್ದಾರೆ.
ಅಲ್ಲದೇ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯವಾದರೆ ತೆಲಂಗಾಣದ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಶ್ರೀ ರಾಮುಲು ಹೇಳಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ಜಿಲ್ಲೆಗಳಲ್ಲಿಗೆ ಮಾತ್ರವೇ ಮುಖ್ಯಮಂತ್ರಿಯಾಗಿದ್ದು, ಕರಾವಳಿಯನ್ನೂ ಕೂಡ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲೆಗಳಿಗೆ ಇನ್ನೂ ಮಂತ್ರಿಗಳನ್ನು ನಿಯೋಜನೆ ಮಾಡಿಲ್ಲ ಎಂದರು.
ಬಜೆಟ್ ನಲ್ಲಿಯೂ ಕೂಡ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಕೆಶಿಪ್ ಎನ್ನೋ ಸಂಸ್ಥೆ ಬೆಳಗಾವಿ ಯಿಂದ ಹಾಸನಕ್ಕೆ ವರ್ಗಾವಣೆ ಮಾಡಿದ್ದು, ಇಂತಹ ಸ್ಥಳಾಂತರದ ಅವಶ್ಯಕತೆ ಏನು ಇತ್ತು ಎಂದು ಶ್ರೀ ರಾಮುಲು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮುಖಂಡರ ವಿರುದ್ಧವೂ ಕೂಡ ವಾಗ್ದಾಳಿ ನಡೆಸಿದ್ದು, ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡುತ್ತಿದ್ದಾರೆ. ಇರುವಷ್ಟು ದಿನ ಲೂಟಿ ಮಾಡಿ ತೆರಳಬೇಕು ಎನ್ನುವ ಭಾವನೆ ಸರ್ಕಾರದಲ್ಲಿ ಇದೆ ಎಂದರು.
ಇನ್ನು ಮುಖ್ಯಮಂತ್ರಿ ಕಣ್ಣೀರು ವಿಚಾರ ಪ್ರಸ್ತಾಪ ಮಾಡಿದ ಅವರು ಅಧಿಕಾರದಲ್ಲಿ ಇರುವ ಸಿಎಂ ಅಳುತ್ತಿದ್ದಾರೆ. ಯಾಕೆ ಅಳುತ್ತಾರೋ ಎನ್ನುವುದು ಗೊತ್ತಿಲ್ಲ. ಕುಮಾರ ಸ್ವಾಮಿ ವಿಕ್ಸ್ ಹಚ್ಚಿಕೊಂಡು ಬಂದು ಅಳುತ್ತಾರೆ ಎಂದು ಜಮೀರ್ ಆಹ್ಮದ್ ಹೇಳುತ್ತಾರೆ ಎಂದರು.
ಇನ್ನು ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ಅರಣ್ಯ ಸಚಿವರು ಹಣ ಮಾಡುತ್ತಿದ್ದಾರೆ. ಕುಮಾರ ಸ್ವಾಮಿ ಮನೆ ಮುಂದೆ ಸೂಟ್ ಕೇಸ್ ಹಿಡಿದುಕೊಂಡು ನಿಂತಿರುತ್ತಾರೆ. ವರ್ಗಾವಣೆಯಲ್ಲಿಯೂ ಕೂಡ ದಂಧೆ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಉತ್ತರ ಕರ್ನಾಟಕಕ್ಕೆ ಮಾತ್ರ ಹೆಚ್ಚಿನ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.