ಕದಿರೇಶ್ ಹತ್ಯೆ: ತನಿಖೆಗೆ ವಿಶೇಷ ತಂಡ
- ಕದಿರೇಶ್ ಕೊಲೆ ಆರೋಪಿಗಳಿಗಾಗಿ ವಿಶೇಷ ತಂಡ
- ಬೇರೆಯವರಂತೆ ಬೇಜಾವಾಬ್ದಾರಿ ಹೇಳಿಕೆಗಳನ್ನು ನೀಡಲ್ಲ
ಬೆಂಗಳೂರು: ಕದಿರೇಶ್ ಹತ್ಯೆಯ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಭೇಟಿ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕದಿರೇಶ್ ಕೊಲೆ ಆರೋಪಿಗಳಿಗಾಗಿ ವಿಶೇಷ ತಂಡ ರಚಿಸಲಾಗಿದೆ. ಬೇರೆಯವರಂತೆ ಬೇಜಾವಾಬ್ದಾರಿ ಹೇಳಿಕೆಗಳನ್ನು ನೀಡಲ್ಲ, ಪ್ರಕರಣದ ತನಿಖೆಯಾಗುವವರೆಗೆ ಹೆಚ್ಚು ಮಾತನಾಡಲ್ಲ, ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ವಾರ್ಡ್ ನಂಬರ್ 138 ಛಲವಾದಿ ಪಾಳ್ಯರ ಕಾರ್ಪೋರೇಟರ್ ರೇಖಾ ಪತಿ ಕದಿರೇಶನ್’ನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ಕಾಟನ್ಪೇಟೆಯ ಅಂಜಿನಪ್ಪ ಗಾರ್ಡನ್ನಲ್ಲಿ ಕದಿರೇಶ್ ಹತ್ಯೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಸಹಚರರಿಂದ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಮೃತ ಕದಿರೇಶ್ ಕಾಟನ್ಪೇಟೆಯಲ್ಲಿ 2002ರಲ್ಲೇ ರೌಡಿ ಶೀಟರ್ ಖಾತೆ ತೆರೆದಿದ್ದ. ಕದಿರೇಶ್ ವಿರುದ್ಧ ಹಲವಾರು ಶ್ರೀರಾಂಪುರ, ಕಾಟನ್ಪೇಟೆ’ಗಳಲ್ಲಿ ಕೇಸ್’ಗಳು ದಾಖಲಾಗಿತ್ತು. ಒಟ್ಟು 15 ಪ್ರಕರಣಗಳಲ್ಲಿ ಕದಿರೇಶ್ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.
ಕದಿರೇಶ್ ವಿರುದ್ಧದ 5 ಪ್ರಕರಣಗಳು ಖುಲಾಸೆಯಾಗಿದ್ದು, ಇನ್ನೂ 10 ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಕದಿರೇಶ್ ವಿರುದ್ಧ ಕೊಲೆ, ಕೊಲೆಯತ್ನ. ಹಲ್ಲೆ ಬೆದರಿಕೆ ದೂರುಗಳಿತ್ತು.