ಶೀಘ್ರವೇ 20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ?
ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ. ಶೀಘ್ರ 20 ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ.
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ 20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂಬುದು ಜನತೆಯ ಆಶಯವಾಗಿತ್ತು. ಆದರೆ, 2018ರಲ್ಲಿ ಸ್ಪಲ್ಪದರಲ್ಲಿಯೇ ಆ ಅವಕಾಶ ತಪ್ಪಿತ್ತು. ಈಗ ಸರ್ಕಾರ ರಚನೆಯಾಗಲಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನ 20 ಶಾಸಕರು ಬಿಜೆಪಿಗೆ ಬರಲಿದ್ದಾರೆ. ಕಾರಣ ಅವರಿಗೆ ಭವಿಷ್ಯದ ಬಗ್ಗೆ ಚಿಂತೆ ಇದೆ. ಕೇವಲ ಎರಡು ದಿನ ಕಾದು ನೋಡಿ ಎಂದು ಹೇಳಿದರು.
ಚುನಾವಣೋತ್ತರ ಸಮೀಕ್ಷೆಗಳು ಸಹ ಬಿಜೆಪಿ ಪರವಾಗಿ ಬಂದಿವೆ. ರಾಷ್ಟ್ರದಲ್ಲಿ ಪಕ್ಷವು 350 ಸ್ಥಾನ ಜಯಗಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದರು. ಅದು ಫಲಿತಾಂಶದಲ್ಲಿ ನಿಜವಾಗಲಿದೆ. ಇದೆಲ್ಲದರ ಪರಿಣಾವು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟರು.