(ವಿಡಿಯೊ)ಕೆಲವು ಅಧಿಕಾರಿಗಳು ನಮ್ಮನ್ನು ಗುಲಾಮರಂತೆ ಕಾಣುತ್ತಾರೆ: ವೈರಲ್ ಆದ ಮತ್ತೊಬ್ಬ ಸೈನಿಕನ ವಿಡಿಯೊ
ದೇಶದ ಗೌರವ ಹಾಳಾಗಬಾರದೆಂಬ ಕಾರಣಕ್ಕೆ ಪ್ರತಿಯೊಬ್ಬ ಯೋಧರು ದೂರು ನೀಡಲು ಯೋಚಿಸುತ್ತಾರೆ.ಆದರೆ ಎಷ್ಟು ದಿನ ಈ ನೋವನ್ನು ಸಹಿಸಿಕೊಂಡಿರುವುದು. ಕೆಲವು ಅಧಿಕಾರಿಗಳು ನಮ್ಮನ್ನು ಗುಲಾಮರಿಗಿಂತ ಕಡೆಯಾಗಿ ಕಾಣುತ್ತಾರೆ.
ನವದೆಹಲಿ(ಮಾ.07): ಕೆಲವು ದಿನಗಳ ಹಿಂದೆ ಬಿಎಸ್'ಎಫ್ ಯೋಧ ತೇಜ್ ಬಹುದ್ದೂರ್ ಸೇನೆಯಲ್ಲಿ ಸೈನಿಕರಿಗೆ ನೀಡುವ ಕಳಪೆ ಆಹಾರದ ಬಗ್ಗೆ ಸೆಲ್ಫಿ ವಿಡಿಯೋ ತೆಗೆದು ದೇಶದಾದ್ಯಂತ ಸುದ್ದಿಯಾಗಿದ್ದ. ಈ ವಿಡಿಯೋ ಕೇಂದ್ರ ಗೃಹ ಸಚಿವರು ಹಾಗೂ ಸೇನೆಯ ಮುಖ್ಯಸ್ಥರ ಗಮನಕ್ಕೂ ಹೋಗಿ ಸೈನಿಕರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು.
ಈಗ ಮತ್ತೊಬ್ಬ ಯೋಧ ಸೆಲ್ಫಿ ವಿಡಿಯೊದ ಮೂಲಕ ಸುದ್ದಿಯಾಗಿದ್ದಾನೆ. ಎಲ್ಲಾ ಕಡೆ ಚರ್ಚೆಯಾಗುತ್ತಿರುವ ಈ ಯೋಧನ ಹೆಸರು ಸಿಂಧವ್ ಜೋಗಿದಾಸ್. ಈತ ವಿಡಿಯೋ ಮೂಲಕ ಆರೋಪ ಮಾಡಿರುವ ಸಂಕ್ಷಿಪ್ತ ವಿವರ ಇಂತಿದೆ.
'ನಮ್ಮನ್ನು ಕೆಲವು ಅಧಿಕಾರಿಗಳು ಗುಲಾಮರಂತೆ ಕಾಣುತ್ತಾರೆ. ಅಲ್ಲದೆ ನಾನು ಆರ್ಡರ್ಲಿ ಡ್ಯುಟಿಗಳನ್ನು ಪ್ರಶ್ನಸಿದ್ದಕ್ಕೆ ನನಗೆ ಶಿಕ್ಷೆ ನೀಡಲಾಗಿದೆ. ದೇಶದ ಗೌರವ ಹಾಳಾಗಬಾರದೆಂಬ ಕಾರಣಕ್ಕೆ ಪ್ರತಿಯೊಬ್ಬ ಯೋಧರು ದೂರು ನೀಡಲು ಯೋಚಿಸುತ್ತಾರೆ.ಆದರೆ ಎಷ್ಟು ದಿನ ಈ ನೋವನ್ನು ಸಹಿಸಿಕೊಂಡಿರುವುದು. ಕೆಲವು ಅಧಿಕಾರಿಗಳು ನಮ್ಮನ್ನು ಗುಲಾಮರಿಗಿಂತ ಕಡೆಯಾಗಿ ಕಾಣುತ್ತಾರೆ. ಅವರ ಎಲ್ಲ ಕೆಲಸಗಳನ್ನು ಬಲವಂತವಾಗಿ ಮಾಡಿಸಿಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದರೆ ಶಿಕ್ಷೆ ನೀಡುತ್ತಾರೆ'.
'ನಾನು ಇದನೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡದೆ ಪ್ರಧಾನಮಂತ್ರಿ ಕಚೇರಿ ಹಾಗೂ ರಕ್ಷಣಾ ಮಂತ್ರಿಗಳ ಕಚೇರಿಗೆ ದೂರು ನೀಡಿ ವಾಪಸ್ ಬಂದಾಗ ಮುಂದಿನ ದಿನವೆ ನನ್ನ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಉತ್ತರ ಬಂದಿತ್ತು. ಸೇನೆಯ ಕೋರ್ಟ್ ನನ್ನ ಮೇಲೆ 2 ಬಾರಿ ತನಿಖೆಗೆ ಆದೇಶಿಸಿದ್ದು ಒಂದು ವರ್ಷದಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಆ ಕಾರಣದಿಂದ ನಾನು ಸುಮ್ಮನಿದ್ದೇನೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೂ ದೂರು ನೀಡಿದ್ದು ಅಲ್ಲಿಂದಲ್ಲು ಉತ್ತರ ಬಂದಿಲ್ಲ. ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂದು' ವಿಡಿಯೋದಲ್ಲಿ ತಿಳಿಸಿದ್ದಾನೆ.
ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತೇಜ್ ಬಹುದ್ದೂರ್ ವಿಡಿಯೋ ವೈರಲ್ ಆದಾಗ ಸೇನಾ ಮುಖ್ಯಸ್ಥರು ಸೈನಿಕರು ಸಮಸ್ಯೆಗಳನ್ನು ಸಾಮಾಜಿಕ ಮಾಲಕ ಹೇಳದೆ ಅದಕ್ಕಾಗಿ ಇರುವ ಪ್ರತ್ಯೇಕ ವೇದಿಕೆಯನ್ನು ಬಳಸಿಕೊಳ್ಳುವಂತೆ' ತಿಳಿಸಿದ್ದರು.