ಕ್ಯಾನ್ಸರ್ ಔಷಧ ಬೀಜದ ನೆಪದಲ್ಲಿ 20 ಲಕ್ಷ ರು ವಂಚನೆ
ಕ್ಯಾನ್ಸರ್ ಗುಣಪಡಿಸುವ ಔಷಧದ ಬೀಜಗಳ ಮಾರಾಟದ ನೆಪದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ ಆನ್ಲೈನ್ನಲ್ಲಿ 20 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಜೆ.ಪಿ.ನಗರದ 5ನೇ ಹಂತದ ನಿವಾಸಿ ಸಾಫ್ಟ್ವೇರ್ ಉದ್ಯೋಗಿ ಎಚ್.ಎಸ್. ರವಿಕುಮಾರ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು (ಜ.06): ಕ್ಯಾನ್ಸರ್ ಗುಣಪಡಿಸುವ ಔಷಧದ ಬೀಜಗಳ ಮಾರಾಟದ ನೆಪದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ ಆನ್ಲೈನ್ನಲ್ಲಿ 20 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಜೆ.ಪಿ.ನಗರದ 5ನೇ ಹಂತದ ನಿವಾಸಿ ಸಾಫ್ಟ್ವೇರ್ ಉದ್ಯೋಗಿ ಎಚ್.ಎಸ್. ರವಿಕುಮಾರ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. 2017ರ ಸೆಪ್ಟೆಂಬರ್ನಲ್ಲಿ ಅಪರಿಚಿತನೊಬ್ಬ ರವಿಕುಮಾರ್ ಅವರಿಗೆ ಕರೆ ಮಾಡಿ, ಭಾರತದಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧದ ಬೀಜಗಳು ಸಿಗುತ್ತವೆ. ಇದನ್ನು ಖರೀದಿಸಿ ಕೊಟ್ಟರೆ, ಕಮಿಷನ್ ಕೊಡುತ್ತೇವೆ ಎಂದು ಹೇಳಿದ್ದ.
ಇದನ್ನು ನಂಬದ ರವಿಕುಮಾರ್ ಮೊದಲಿಗೆ ಅಪರಿಚಿತಗೆ ಬೈದು ಸುಮ್ಮನಾಗಿದ್ದರು. ಆದರೂ ಬಿಡದ ಆರೋಪಿ, ರವಿಕುಮಾರ್ಗೆ ಆಗಾಗ್ಗೆ ಕರೆ ಮಾಡಿ ಪೀಡಿಸುತ್ತಿದ್ದ. ಇದಾದ ಎರಡು ತಿಂಗಳ ಬಳಿಕ ರವಿಕುಮಾರ್ ಅವರಿಗೆ ಪತ್ರವೊಂದು ಬಂದಿತು, ನೋವಾ ಫಾರ್ಮ್ ಲೆಟರ್ ಹೆಡ್ ನಲ್ಲಿದ್ದ ಪತ್ರದಲ್ಲಿ, ಮಹಾರಾಷ್ಟ್ರದಲ್ಲಿ ಶುಕ್ಲಾ ಫಾರ್ಮ ಕಂಪನಿ ಇದ್ದು, ಅಲ್ಲಿಂದ ನಮಗೆ ಔಷಧದ ಬೀಜಗಳು ಪೂರೈಕೆಯಾಗುತ್ತವೆ.
ನೀವು ಏಜೆಂಟ್ ಕೆಲಸ ಮಾಡಬೇಕು. ಒಂದು ಪ್ಯಾಕೇಟ್ ಬೀಜಕ್ಕೆ 50 ಸಾವಿರ ಕಮಿಷನ್ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಪತ್ರದಲ್ಲಿ ಮಹಾರಾಷ್ಟ್ರದ ಕಂಪನಿಯ ಆಡಳಿತ ಮಂಡಳಿ ಮುಖ್ಯಸ್ಥ ಗಿರೀಶ್ ಹಾಗೂ ಶಿಲ್ಪಾ ಎಂಬುವರ ಮೊಬೈಲ್ ಸಂಖ್ಯೆಯನ್ನು ಮಾರ್ ಇವರನ್ನು ಸಂಪರ್ಕಿಸಿದಾಗ 1 ಪ್ಯಾಕೇಟ್ ಬೀಜಕ್ಕೆ 2.5 ಲಕ್ಷ ರು ಲಕ್ಷ ನಿಗದಿ ಮಾಡಿದ್ದರು. ಈ ಮಧ್ಯ ಮೊದಲು ಮೊಬೈಲ್ನಲ್ಲಿ ಸಂಪರ್ಕಿಸಿದ್ದ ಅಪರಿಚಿತ ವ್ಯಕ್ತಿ ರವಿಕುಮಾರ್ಗೆ ಮತ್ತೆ ಫೋನ್ ಮಾಡಿ, ಸದ್ಯ ನೀವು ಹತ್ತು ಪ್ಯಾಕೇಟ್ಗಳನ್ನು ಖರೀದಿಸಿ ನಮಗೆ ಕಳುಹಿಸುವ ವ್ಯವಸ್ಥೆ ಮಾಡಿ. ಆ ವಸ್ತು ನಮಗೆ ತಲುಪುತ್ತಿದ್ದಂತೆಯೇ ನಿಮ್ಮ ಖಾತೆಗೆ 30 ಲಕ್ಷ ಜಮೆ ಮಾಡುತ್ತೇವೆ ಎಂದು ಹೇಳಿದ್ದನು.
ಆಗ ಕಂಪನಿಯನ್ನು ಸಂಪರ್ಕಿಸಿದಾಗ ಮೊದಲು ಹಣ ಜಮಾ ಮಾಡಿ ನಂತರ ಔಷಧ ಬೀಜ ಪೂರೈಸುವುದಾಗಿ ತಿಳಿಸುತ್ತದೆ. ಇದರಿಂದ ಅನಿವಾರ್ಯವಾಗಿ ರವಿಕುಮಾರ್ ಕಂತುಗಳಲ್ಲಿ ನಕಲಿ ಕಂಪನಿಯ ಕೆನರಾ ಬ್ಯಾಂಕ್ ಖಾತೆ 20 ಲಕ್ಷ ಹಣ ಜಮಾ ಮಾಡುತ್ತಾರೆ. ಬಳಿಕ ರವಿಕುಮಾರ್ ಕಂಪನಿ ಹಾಗೂ ಈ ಮೊದಲು ದೂರವಾಣಿ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗೆ ಫೋನ್ ಮಾಡಿದಾಗ ಆರೋಪಿಗಳು ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದರು. ಇದಾದ ನಂತರ ರವಿಕುಮಾರ್ ಅವರಿಗೆ ತಾವು ವಂಚನೆಗೆ ಒಳಗಾಗಿದ್ದೇನೆ ಎಂಬುದು ತಿಳಿದು ಬಂದಿತು ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದ್ದಾರೆ.