ಪಾಕಿಸ್ತಾನದ ಬಗ್ಗೆ ನಿರಂತರವಾಗಿ ತಮ್ಮ ಪ್ರೇಮವನ್ನು ವ್ಯಕ್ತಪಡಿಸುತ್ತಿರುವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂಪುಟವನ್ನು ಸೇರ್ಪಡೆಯಾಗಲಿ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಹೇಳಿದ್ದಾರೆ.
ನವದೆಹಲಿ : ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ನಿರಂತರವಾಗಿ ಪಾಕಿಸ್ತಾನದ ಬಗ್ಗೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದು, ಅವರು ಇಮ್ರಾನ್ ಖಾನ್ ಸಂಪುಟವನ್ನು ಸೇರಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಹೇಳಿದ್ದಾರೆ.
ಕಸೌಲಿಯಲ್ಲಿ ಖುಷ್ವಂತ್ ಸಿಂಗ್ 7ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಿಧು, ನಾನು ದಕ್ಷಿಣ ಭಾರತ ಪ್ರವಾಸ ಮಾಡಿದಾಗ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಅವರ ಭಾಷೆಯನ್ನು ನನಗೆ ಅರ್ಥವಾಗುವುದಿಲ್ಲ. ಅಲ್ಲಿಯ ಆಹಾರ ಪದ್ದತಿಯೂ ನನಗೆ ಇಷ್ಟವಾಗುವುದಿಲ್ಲ.
ಅವರ ಸಂಸ್ಕೃತಿ ಸಂಪೂರ್ಣ ವಿಭಿನ್ನ. ಆದರೆ ನಾನು ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಅಲ್ಲಿ ಪಂಜಾಬಿ ಇಲ್ಲವೇ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ನನಗೆ ಕಷ್ಟವಾಗುವುದಿಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾತ್ರ ಸಿಧು ಮಾತಿಗೆ ಚಾಟಿ ಬೀಸಿದ್ದಾರೆ.
ಅಲ್ಲದೇ ಇದೇ ವೇಳೆ ಕಾಂಗ್ರೆಸ್ ದೇಶವನ್ನು ಇಬ್ಭಾಗ ಮಾಡಿತ್ತು. ನಮ್ಮ ದೇಶವನ್ನು ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಭಿನ್ನತೆಯಿಂದ ಕಾಣುತ್ತಿದ್ದುದಾಗಿ ಅವರು ಹೇಳಿದ್ದಾರೆ.
ಇಷ್ಟೋಂದು ಪಾಕಿಸ್ತಾನದ ಮೇಲೆ ಪ್ರೀತಿ ಹೊಂದಿರುವ ಸಿಧು ಅವರು ಇಮ್ರಾನ್ ಖಾನ್ ಕ್ಯಾಬಿನೆಟ್ ಸೇರಲಿ. ಪಾಕಿಸ್ತಾನದ ಅನೇಕ ಕಾರ್ಯಕ್ರಮಗಳಿಗೆ ನಿರಂತರವಾಗಿ ಸಿಧು ತೆರಳುತ್ತಿದ್ದು ಪಾಕ್ ನತ್ತಲೇ ಹೆಚ್ಚಿನ ಒಲವನ್ನು ಸಿಧು ಹೊಂದಿದ್ದಾರೆ ಎಂದು ಹೇಳಿದ್ದಾರೆ.
