ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ ಸಿಎಂ ಸಿದ್ದರಾಮಯ್ಯ ದುಬಾರಿ ಹ್ಯೂಬ್ಲಟ್ ವಿವಾದ ಮತ್ತೆ ಗರಿಗೆದರಿದೆ. ಸಮಾಜವಾದಿ ನಾಯಕನೊಬ್ಬ ದುಬಾರಿ ವಾಚ್ ಪಡೆದಿದ್ದ ಹಿಂದಿನ ರಹಸ್ಯವನ್ನು ನಿಮ್ಮ ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ. ವಾಚ್ ಉಡುಗೊರೆಯಾಗಿ ಪಡೆದ ಸಿಎಂ, ಅದಕ್ಕೆ ಪ್ರತಿಯಾಗಿ ಕೊಟ್ಟ ರಿಟರ್ನ್ ಗಿಫ್ಟ್ ಇನ್ನೂ ದುಬಾರಿ. ದುಬಾರಿ ವಾಚ್ ಹಗರಣದ ಮತ್ತೊಂದು ಮುಖವನ್ನು ಸುವರ್ಣ ನ್ಯೂಸ್ ಇವತ್ತು ಬಯಲು ಮಾಡುತ್ತಿದೆ.
ಬೆಂಗಳೂರು(ಜು.31): ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ ಸಿಎಂ ಸಿದ್ದರಾಮಯ್ಯ ದುಬಾರಿ ಹ್ಯೂಬ್ಲಟ್ ವಿವಾದ ಮತ್ತೆ ಗರಿಗೆದರಿದೆ. ಸಮಾಜವಾದಿ ನಾಯಕನೊಬ್ಬ ದುಬಾರಿ ವಾಚ್ ಪಡೆದಿದ್ದ ಹಿಂದಿನ ರಹಸ್ಯವನ್ನು ನಿಮ್ಮ ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ. ವಾಚ್ ಉಡುಗೊರೆಯಾಗಿ ಪಡೆದ ಸಿಎಂ, ಅದಕ್ಕೆ ಪ್ರತಿಯಾಗಿ ಕೊಟ್ಟ ರಿಟರ್ನ್ ಗಿಫ್ಟ್ ಇನ್ನೂ ದುಬಾರಿ. ದುಬಾರಿ ವಾಚ್ ಹಗರಣದ ಮತ್ತೊಂದು ಮುಖವನ್ನು ಸುವರ್ಣ ನ್ಯೂಸ್ ಇವತ್ತು ಬಯಲು ಮಾಡುತ್ತಿದೆ.
ಮತ್ತೊಂದು ತಿರುವು ಪಡೆದುಕೊಂಡ ದುಬಾರಿ ವಾಚ್ ಗಿಫ್ಟ್
ಮುಗೀತಪ್ಪ ಹೆಬ್ಲೋಟ್ ವಾಚ್ ವಿವಾದ ಅನ್ನೋ ಹೊತ್ತಿಗೆ ಅದೇ ವಾಚ್ ಕೇಸ್ಗೆ ಮತ್ತೊಂದು ತಿರುವು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ , 75 ಲಕ್ಷ ಮೌಲ್ಯದ ಹ್ಯೂಬ್ಲಟ್ ವಾಚ್ ಉಡುಗೊರೆಯಾಗಿ ಪಡೆದಿದ್ದಾರೆ ಎನ್ನುವ ಸುದ್ದಿ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಮಾಡಿತ್ತು. ಸಮಾಜವಾದಿ ನಾಯಕನೊಬ್ಬ ದುಬಾರಿ ವಾಚ್ ಪಡೆದಿದ್ದಾರೆಂದು ಪ್ರತಿಪಕ್ಷಗಳು ಉಯಿಲೆಬ್ಬಿಸಿದ್ದವು. ಇಡೀ ಪ್ರಕರಣವೇ ಮುಗಿದುಹೋಯ್ತು ಅನ್ನುವಷ್ಟರಲ್ಲಿ ಮತ್ತೊಂದು ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಸಿಡಿಸಿದ್ದಾರೆ ಹೊಸ ಬಾಂಬ್
ತಮಗೆ ದುಬಾರಿ ವಾಚ್ ಕೊಟ್ಟ ದುಬೈ ಉದ್ಯಮಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿಯಾದ ರಿಟರ್ನ್ ಗಿಫ್ಟ್ ಕೊಟ್ಟಿದ್ದಾರೆ. ಅದು ಅಂತಿಂಥ ಗಿಫ್ಟ್ ಅಲ್ಲ. ಕೋಟ್ಯಂತರ ರೂಪಾಯಿಯ ಪ್ರಮುಖ ಯೋಜನೆಗಳು. ಕಳೆದ ವರ್ಷ ಸಚಿವ ಸಂಪುಟ ಸಭೆ ಎರಡು ಪ್ರಮುಖ ಯೋಜನೆಗಳಿಗೆ ಅಸ್ತು ನೀಡಿತ್ತು. ಅದು ಉಡುಪಿಯ ಸರ್ಕಾರಿ ಆಸ್ಪತ್ರೆ ಮತ್ತು ಜೋಗ್ಫಾಲ್ಸ್ ಅಭಿವೃದ್ದಿಗೆ ಸಂಬಂಧಿಸಿದ ಎರಡು ಯೋಜನೆಗಳನ್ನು ದುಬೈನ ಉದ್ಯಮಿಯೊಬ್ಬರಿಗೆ ಸೇರಿದ ಕಂಪನಿಗೆ ನೀಡಿತ್ತು. ಈ ಎರಡೂ ಯೋಜನೆಗಳನ್ನು ಆತುರಾತುರವಾಗಿ ಖಾಸಗಿ ಕಂಪನಿಗೆ ನೀಡಲು ಹ್ಯೂಬ್ಲಟ್ ವಾಚ್ ಉಡುಗೊರೆಯೇ ಕಾರಣ ಅಂತ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ. ಈ ಸಂಬಂಧ ಸ್ಪೀಕರ್ ಕೋಳಿವಾಡ ಅವರಿಗೆ ದೂರು ನೀಡಿರುವ ಅನುಪಮಾ ಶೆಣೈ , ವಾಚ್ ಹಿಂದಿರುವ ಬೃಹತ್ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
60 ವರ್ಷಕ್ಕೆ ಉಡುಪಿ ಆಸ್ಪತ್ರೆ ಉಡುಗೊರೆ..!: 450 ಕೋಟಿ ಮೊತ್ತದ ಜೋಗ ಜಲಪಾತ ಯೋಜನೆ ಗಿಫ್ಟ್..!
ಈ ದುಬಾರಿ ವಾಚ್ ಕೊಟ್ಟಿದ್ದು, ತಮ್ಮ ಗೆಳೆಯ ಗಿರೀಶ್ ಚಂದ್ರ ವರ್ಮಾ ಎನ್ನುವುದನ್ನು ಸಿಎಂ ಬಹಿರಂಗಪಡಿಸಿದ್ರು. ಆದ್ರೆ, ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದೂ ಸಮರ್ಥಿಸಿಕೊಂಡಿದ್ದರು. ಆದ್ರೆ ಸಿಎಂಗೆ ವಾಚ್ ಗಿಫ್ಟ್ ಕೊಟ್ಟಿದ್ದ ಗಿರೀಶ್ ಚಂದ್ರ ವರ್ಮಾ ಅವರು ಕೆಲಸ ಮಾಡುವುದು ದುಬೈ ಮೂಲದ ಉದ್ಯಮಿಯೊಬ್ಬರ ಕಂಪನಿಯಲ್ಲಿ. ಸಿಎಂಗೆ ಗಿಫ್ಟ್ ಕೊಟ್ಟು, ಈ ಕಂಪನಿ ತನ್ನ ಬಗಲಿಗೆ ಹಾಕಿಕೊಂಡಿದ್ದು, ಉಡುಪಿಯಲ್ಲಿ ನಾಲ್ಕು ಎಕರೆ ವಿಶಾಲ ಜಾಗದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಅಂತಾರೆ ಅನುಪಮಾ ಶೆಣೈ. ಇನ್ನು ವರ್ಷಪೂರ್ತಿ ಜೋಗ ವೈಭವ ಯೋಜನೆ ಮೂಲಕ ಜೋಗ್ ಫಾಲ್ಸ್ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ 450 ಕೋಟಿ ಮೊತ್ತದ ಬೃಹತ್ ಯೋಜನೆಯನ್ನು ಇದೇ ಕಂಪನಿಗೆ ನೀಡಲಾಗಿದೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ವಿದೇಶಿ ಕಂಪನಿಗೆ ನೀಡಲಾಗಿದೆ ಎನ್ನುವುದು ಅನುಪಮಾ ಶೆಣೈ ದೂರು
ಹ್ಯೂಬ್ಲಟ್ ವಾಚ್ ವಿವಾದದ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತಕ್ಕೆ ಹಲವು ದೂರುಗಳು ದಾಖಲಾದರೂ ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಸಂಸ್ಥೆಗಳು ತಪ್ಪೆ ಸಾರಿಸಿದ್ದವು. ಈಗ ಅನುಪಮಾ ಶೆಣೈ ಸ್ಪೀಕರ್ಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಕ್ರಮ ತೆಗೆದುಕೊಳ್ಳದೇ ಹೋದರೆ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಚುನಾವಣೆ ಎದುರಾಗ್ತಿದ್ದಂತೆ ಹ್ಯೂಬ್ಲಟ್ ವಾಚ್ ವಿವಾದ ಮತ್ತೆ ಸಿಎಂಗೆ ಕಂಟಕವಾಗುವ ಸಾಧ್ಯತೆ ಇದೆ.
