ರಾಮನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಅವರು ಮೊದಲು ನಮ್ಮ ಜೊತೆ ಇದ್ದವರು. ಬಿಜೆಪಿಗೆ ಹೋದರು. ಆದರೆ, ಈಗ ಹೋಗಿರುವುದು ತಪ್ಪಾಗಿದೆ ಎಂದು ಅನಿಸಿರಬೇಕು. ಹೀಗಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು. 

ಬಾಗಲಕೋಟೆ : ರಾಮನಗರ ಉಪಚುನಾವಣೆ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಅವರು ಹಿಂದೆ ಸರಿದಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ. ಬಿಜೆಪಿಯ ‘ಆಪರೇಷನ್‌ ಕಮಲ’ ಅವರಿಗೇ ತಿರುಗುಬಾಣವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ಜಮಖಂಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಅವರು ಮೊದಲು ನಮ್ಮ ಜೊತೆ ಇದ್ದವರು. ಬಿಜೆಪಿಗೆ ಹೋದರು. ಆದರೆ, ಈಗ ಹೋಗಿರುವುದು ತಪ್ಪಾಗಿದೆ ಎಂದು ಅನಿಸಿರಬೇಕು. ಹೀಗಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿರಬೇಕು ಎಂದು ಹೇಳಿದರು.

ರಾಮನಗರದಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಬಿಜೆಪಿಯವರಲ್ಲಿ ಬರುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲವೇ ಇಲ್ಲ. ಇದೀಗ ಬಿಜೆಪಿಗೆ ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಆಗಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಆಪರೇಷನ್‌ ಕಮಲ ಶುರು ಮಾಡಿದವರೇ ಬಿಜೆಪಿಯವರು. ಗೆದ್ದ ಎಂಎಲ್‌ಎಗಳನ್ನು ದುಡ್ಡು ಕೊಟ್ಟು ಖರೀದಿ ಮಾಡಿ. ಅವರಿರಂದ ರಾಜೀನಾಮೆ ಕೊಡಿಸಿ, ಮತ್ತೇ ಚುನಾವಣೆಗೆ ನಿಲ್ಲಿಸಿರುವುದು ಅವರ ಆಡಳಿತದ ಕಾಲದಲ್ಲಿಯೇ. ಆಗ ಅವರು ಮಾಡಿದ್ದನ್ನು ಈಗ ಉಣ್ಣುತ್ತಿದ್ದಾರೆ. ಅದಕ್ಕೆ ಮಾಡಿದ್ದುಣ್ಣೋ ಮಾರಾಯಾ ಎನ್ನುವಂತೆ ಅವರ ಮಂತ್ರವೇ ಅವರಿಗೆ ತಿರುಗು ಬಾಣವಾಗಿದೆ ಎಂದು ತಿಳಿಸಿದರು.