ಬಾದಾಮಿ ಕ್ಷೇತ್ರದ ಋಣ ತೀರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ಲ್ಯಾನ್
ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಸಿದ್ದರಾಮಯ್ಯ ಬಾದಾಮಿಗೆ ಭೇಟಿ ನೀಡಿದ್ದಾರೆ. ಬಾದಾಮಿ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿದ್ದರಾಮಯ್ಯ ತಮ್ಮ ಪ್ಲ್ಯಾನ್ ಏನೇಂಬುವುದನ್ನು ಬಹಿರಂಗಪಡಿಸಿದ್ದಾರೆ.
ಬಾದಾಮಿ: ಬಾದಾಮಿಯಲ್ಲಿ ಮನೆ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಬಾದಾಮಿಯಿಂದ ಶಾಸಕರಾಗಿ ಗುರುವಾರ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿರುವ, ಸಿದ್ದರಾಮಯ್ಯ, ತಿಂಗಳಿನಲ್ಲಿ 2 ಬಾರಿ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹುಲಸಗೇರಿಯಲ್ಲಿ ಕೃತಜ್ಞತಾ ಸಮಾರಂಭದಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.
ದೂರದ ಮೈಸೂರಿನಿಂದ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ರೂ, ನನ್ನ ಸ್ಥಳೀಯನಂತೆ ಕಂಡು, ನನಗೆ ಓಟ್ ಹಾಕಿ ಆಶಿರ್ವದಿಸಿದ್ದೀರಿ, ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ, ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶೀಘ್ರವೇ ಬಾದಾಮಿಯಲ್ಲಿ ಮನೆಮಾಡುತ್ತೇನೆ. ನಾನು ಬಂದಾಗ ಬಂದಾಗ ನಿಮ್ಮ ಸಮಸ್ಯೆಗಳನ್ನು ನನ್ನ ಮುಂದೆ ಹೇಳಬಹುದು, ನಿಮ್ಮ ಸಮಸ್ಯೆಗಳನ್ನ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಐದು ವರ್ಷಕಾಲ ಈ ಕ್ಷೇತ್ರದ ಶಾಸಕನಾಗಿ, ಕ್ಷೇತ್ರದ ಪ್ರತಿನಿಧಿಯಾಗಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ, ಎಂದು ಮಾಜಿ ಸಿಎಂ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ನ ಜಿ.ಟಿ. ದೇವೇಗೌಡ ಮುಂದೆ ಪರಾಭವಗೊಂಡರೆ, ಬಾದಮಿಯಲ್ಲಿ ಬಿಜೆಪಿಯ ಶ್ರೀರಾಮುಲುರನ್ನು ಸೋಲಿಸಿದ್ದರು.