ಬದ್ಧತೆ ಇಲ್ಲದ ರಾಜಕಾರಣ, ಭಿಕಾರಿಗಳೇ ರಾಜರು : ಸಿದ್ದರಾಮಯ್ಯ
ಇಂದಿನ ರಾಜಕಾರಣದಲ್ಲಿ ಯಾವುದೇ ರೀತಿಯ ಬದ್ಧತೆ ಇಲ್ಲ ಸಿದ್ದರಾಮಯ್ಯ ಅವರು ಇತ್ತೀಚಿನ ರಾಜಕಾರಣದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪರೋಕ್ಷವಾಗಿ ಮೈತ್ರಿ ಸರ್ಕಾರದ ಬಗ್ಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು : ಇಂದಿನ ದಿನಗಳಲ್ಲಿ ಬದ್ಧತೆ ಇಲ್ಲದ ರಾಜಕಾರಣ ಮೇಳೈಸುತ್ತಿದ್ದು, ರಾಜರು ಭಿಕಾರಿಗಳಾಗುತ್ತಿದ್ದಾರೆ, ಭಿಕಾರಿಗಳು ರಾಜ ರಾಗುತ್ತಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಹೊರಟುಹೋಗುತ್ತಿದ್ದು, ರಾಜಕೀಯ ಚಾಣಾಕ್ಷತನವೂ ಕ್ಷೀಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಶುಕ್ರವಾರ ಮಾಜಿ ಸಚಿವ ದಿ. ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಆತ್ಮಕಥೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಆತ್ಮಕಥೆಯಲ್ಲಿನ ತುಣುಕುಗಳನ್ನು ಉಲ್ಲೇಖಿಸಿ ಪ್ರಸ್ತುತ ರಾಜಕಾರಣದ ಬಗ್ಗೆ ಅರ್ಥಗರ್ಭಿತವಾಗಿ ಮಾತನಾಡಿದ ಸಿದ್ದರಾಮಯ್ಯ ಈ ಮೂಲಕ ಮೈತ್ರಿ ಸರ್ಕಾರದ ನಡವಳಿಕೆ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಮೊಹಿದೀನ್ ಅವರು ಮುಸ್ಲಿಮ್ ಆಗಿ ಜನಿಸಿದರೂ ಎಲ್ಲ ವರ್ಗಗಳಿಗೆ ಜನನಾಯಕರಾಗಿದ್ದರು ಎಂದು ಮೆಚ್ಚಿಕೊಂಡರು.