ಸಿದ್ದು ನಂತರ ಕೈ ಶಾಸಕರ ಫಾರಿನ್ ಟ್ರಿಪ್ : ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ?
ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ,ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರು ಅಮೆರಿಕಾದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಹೊರಡಲಿದ್ದಾರೆ.
ಬೆಂಗಳೂರು[ಆ.27]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.3 ರಂದು ವಿದೇಶಿ ಪ್ರವಾಸ ಹೊರಟಿರುವ ಬೆನ್ನಲ್ಲೇ ಬೆಂಗಳೂರಿನ ಕಾಂಗ್ರೆಸ್ ಶಾಸಕರ ಒಂದು ತಂಡ ಕೂಡ ಅಮೆರಿಕಾಕ್ಕೆ ಭೇಟಿ ನೀಡಲಿದ್ದು ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ನೀಡಲಿದೆಯೇ ಎಂಬ ಆತಂಕ ಆಡಳಿತ ನಾಯಕರಲ್ಲಿ ಶುರುವಾಗಿದೆ.
ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ,ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರು ಅಮೆರಿಕಾದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಹೊರಡಲಿದ್ದಾರೆ. ಸಿದ್ದು, ಕಾಂಗ್ರೆಸ್ ಶಾಸಕರ ಟೀಂ ಬೇರೆ ಬೇರೆಯಾಗಿ ಹೊರಟರೂ ಎಲ್ಲರೂ ಒಂದು ಕಡೆ ಸೇರಿ ಸಭೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೂರು ಟೀಂಗಳು ಪ್ರತ್ಯೇಕ
ಸಿದ್ದರಾಮಯ್ಯ ಅವರ ಜೊತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಬೃಹತ್ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಕೂಡ ಅಮೆರಿಕಾಕ್ಕೆ ತೆರಳಲಿದ್ದಾರೆ. ವಿದೇಶಕ್ಕೆ ಮೂರು ತಂಡಗಳು ಪ್ರತ್ಯೇಕವಾಗಿ ಹೊರಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಪರಮೇಶ್ವರ್ ಮೇಲಿನ ಅಸಮಾಧಾನಕ್ಕೆ ಬೆಂಗಳೂರು ಶಾಸಕರು ವಿದೇಶಕ್ಕೆ ಹೊರಟಿದ್ದಾರೆ ಎನ್ನುತ್ತಿವೆ ಮೂಲಗಳು. ಇದರ ಜೊತೆ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಸಿಗದಿರುವುದು ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧವೂ ಮುನಿಸಿದೆ ಎನ್ನಲಾಗುತ್ತಿದೆ.