ಕ್ಷೇತ್ರ ಬದಲಿಸುತ್ತಾರಾ ಶ್ರೀರಾಮುಲು ?
ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಅವರನ್ನು ಮೊಳಕಾಲ್ಮುರಿನಿಂದ ಕಣಕ್ಕಿಳಿಸಲು ಪಕ್ಷ ಆಸಕ್ತಿ ತೋರಿದೆ ಎನ್ನಲಾಗುತ್ತಿದೆ
ಚಿತ್ರದುರ್ಗ(ಮಾ.30): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಬಳಿಕ ಭಾರಿ ರಾಜಕೀಯ ಬದಲಾವಣೆಗಳಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಮುಂದಾಗಿರುವ ಬಿಜೆಪಿಯು ಮೊಳಕಾಲ್ಮುರು ಕ್ಷೇತ್ರದಿಂದ ಸಂಸದ ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ದಟ್ಟವಾಗಿ ಹರಡಿವೆ.
ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿ ಗ್ರಾಮಾಂತರ, ಕೂಡ್ಲಿಗಿ ವಿಧಾನಸಭೆ ಕ್ಷೇತ್ರಗಳು ಒಂದಕ್ಕೊಂದು ಹತ್ತಿರವಿದ್ದು ಎಲ್ಲವೂ ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಮೀಸಲಾಗಿವೆ. ಹೀಗಾಗಿ, ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಅವರನ್ನು ಮೊಳಕಾಲ್ಮುರಿನಿಂದ ಕಣಕ್ಕಿಳಿಸಲು ಪಕ್ಷ ಆಸಕ್ತಿ ತೋರಿದೆ ಎನ್ನಲಾಗುತ್ತಿದೆ. ಜೊತೆಗೆ ರಾಮುಲು ಅವರು ಮೊಳಕಾಲ್ಮುರಿನಿಂದ ಸ್ಪರ್ಧಿಸಿದರೆ, ಅಕ್ಕಪಕ್ಕದಲ್ಲೇ ಇರುವ ಉಳಿದ ನಾಲ್ಕು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವುದು ಸುಲಭವಾಗಲಿದೆ ಎಂಬ ಅಭಿಪ್ರಾಯವನ್ನು ಸಂಘ ಪರಿವಾರ ವ್ಯಕ್ತಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.