Asianet Suvarna News Asianet Suvarna News

ಶಿವಾರಾಧನೆಗೆ ವೈಜ್ಞಾನಿಕ ಹಿನ್ನೆಲೆಯೂ ಇದೆ..!

ದೇಹದೊಳಗೆ ಹುದುಗಿರುವ, ದೇಹವನ್ನೂ ಮೀರಿ ಬೆಳೆಯಬಲ್ಲ ಮನಸ್ಸಿನಂತೆ ಜಗತ್ತನ್ನು ಆವರಿಸಿ ನಿಂತಿದೆ ಶಿವತತ್ವ. ಭಕ್ತರ ಇಷ್ಟಾನುಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವ ಧ್ಯಾನಪ್ರಿಯ. ಶಿವನ ಮಹಿಮೆ ಕೊಂಡಾಡುವ ಹಬ್ಬವೇ ಶಿವರಾತ್ರಿ. ಧ್ಯಾನ-ಜಪದಂಥ ವೈಯಕ್ತಿಕ ಸಾಧನೆಯ ಜೊತೆಗೆ, ಸಂಕೀರ್ತನೆ-ಹರಿಕತೆಗಳಂಥ ಸಾಮೂಹಿಕ ಸಾಧನೆಯ ಆಯಾಮವೂ ಶಿವರಾತ್ರಿ ಆಚರಣೆಗೆ ಇರುವುದು ವಿಶೇಷ. ಈ ವಿಶೇಷ ದಿನಕ್ಕೆ ಹಲವು ಪುರಾಣಗಳ ಪ್ರತೀತಿಯೂ ಇದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಆಚರಣೆಯಲ್ಲಿರುವ ಮಹಾ ಶಿವರಾತ್ರಿ ಆಚರಣೆಯ ಹಿಂದಿನ ಪ್ರತೀತಿ ಏನು, ಇದರ ಮಹತ್ವ ಏನು, ಎಲ್ಲಿಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತದೆ.

Shivaratri Special

ಬೆಂಗಳೂರು : ದೇಹದೊಳಗೆ ಹುದುಗಿರುವ, ದೇಹವನ್ನೂ ಮೀರಿ ಬೆಳೆಯಬಲ್ಲ ಮನಸ್ಸಿನಂತೆ ಜಗತ್ತನ್ನು ಆವರಿಸಿ ನಿಂತಿದೆ ಶಿವತತ್ವ. ಭಕ್ತರ ಇಷ್ಟಾನುಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವ ಧ್ಯಾನಪ್ರಿಯ. ಶಿವನ ಮಹಿಮೆ ಕೊಂಡಾಡುವ ಹಬ್ಬವೇ ಶಿವರಾತ್ರಿ. ಧ್ಯಾನ-ಜಪದಂಥ ವೈಯಕ್ತಿಕ ಸಾಧನೆಯ ಜೊತೆಗೆ, ಸಂಕೀರ್ತನೆ-ಹರಿಕತೆಗಳಂಥ ಸಾಮೂಹಿಕ ಸಾಧನೆಯ ಆಯಾಮವೂ ಶಿವರಾತ್ರಿ ಆಚರಣೆಗೆ ಇರುವುದು ವಿಶೇಷ. ಈ ವಿಶೇಷ ದಿನಕ್ಕೆ ಹಲವು ಪುರಾಣಗಳ ಪ್ರತೀತಿಯೂ ಇದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಆಚರಣೆಯಲ್ಲಿರುವ ಮಹಾ ಶಿವರಾತ್ರಿ ಆಚರಣೆಯ ಹಿಂದಿನ ಪ್ರತೀತಿ ಏನು, ಇದರ ಮಹತ್ವ ಏನು, ಎಲ್ಲಿಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತದೆ.

ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆ

ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿಯೂ ಇದೆ.

ಸ್ಕಂದ ಪುರಾಣದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ. ಶಿವರಾತ್ರಿಯ ಸಮಯ ಪೂಜೆಗೆ ಬಹು ಪ್ರಾಶಸ್ತ್ಯ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ, ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲವು ಪೂಜೆಗೆ ಪ್ರಾಶಸ್ತ್ಯವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

ತ್ರಯೋದಶಿಯು ಶಕ್ತಿರೂಪವಾದರೆ, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದು ಶಿವಶಕ್ತಿಯೋಗವಾಗುತ್ತದೆ. ಅದೇ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೇ, ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ನಂಬಿಕೆ ಇದೆ.

ಶಿವರಾತ್ರಿಯ ಮತ್ತೊಂದು ವಿಶೇಷವೆಂದರೆ, ಶಿವನು ಪಾರ್ವತಿ ದೇವಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವೇ. ಪಾರ್ವತಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ. ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ.

ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು. ಆದರೆ ದೇವತೆಗಳು ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯಲು ಮುಂದಾಗಲಿಲ್ಲ. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ. ಅದೇ ಸಮಯಕ್ಕೆ ಪತ್ನಿ ಪಾರ್ವತಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ವ್ಯಕ್ತಿ ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ಹೀಗಾಗಿಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಶಿವರಾತ್ರಿಗೆ ವೈಜ್ಞಾನಿಕ ಹಿನ್ನೆಲೆ ಇದೆ!

ಈ ಸಮಯದಲ್ಲಿ ಚಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅ ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆ ಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯ ದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು ಸಾಮಾನ್ಯ. ಶಿವರಾತ್ರಿಯಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು.

 

ಉಪವಾಸ, ಜಾಗರಣೆ ಹಬ್ಬದ ವಿಶೇಷ ಆಚರಣೆ

ಶಿವರಾತ್ರಿ ಹಬ್ಬದ ಮಹತ್ವದ ಅಂಶ ಉಪವಾಸ. ‘ಉಪ’ ಎಂದರೆ - ಸಮೀಪ, ವಾಸ ಅಂದರೆ ‘ಇರುವುದು’ ಎಂದರ್ಥ. ಉಪವಾಸ ಎಂದರೆ ಭಕ್ತರು ಭಗವಂತನ ಹತ್ತಿರ ಇರುವುದು ಎಂದರ್ಥ. ಹಾಗಾಗಿ ಉಪವಾಸ ವ್ರತಕ್ಕೆ ಅಷ್ಟೊಂದು ಮಹತ್ವವಿದೆ. ಇನ್ನು ‘ಜಾಗರಣೆ’ಯಿಂದಾಗಿ ಅನಾಯಾಸ ವಾಗಿ ಮುಕ್ತಿ ಲಭಿಸುತ್ತದೆ. ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಶಿವರಾತ್ರಿ ಯಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸ ಲಾಗುತ್ತದೆ. ಇಡೀ ರಾತ್ರಿ ಶಿವದೇವಾಲ ಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ಭಾರತದಲ್ಲಿ  ಶಿವ ನಾಮಸ್ಮರಣೆ ಹೇಗೆ?

ಭಾರತದ ಪ್ರಮುಖ ಜ್ಯೋತಿರ್ಲಿಂಗ ಶಿವ ದೇವಸ್ಥಾನಗಳು, ಉದಾಹರಣೆಗೆ ವಾರಣಾಸಿ ಮತ್ತು ಸೋಮನಾಥದಲ್ಲಿ ಮಹಾ ಶಿವರಾತ್ರಿಯಲ್ಲಿ ಭಕ್ತಿಯಿಂದ ಪೂಜೆ ಪುನಸ್ಕಾರಗಳು ನೆರವೇರುತ್ತದೆ.  ಹಿಮಾಚಲ ಪ್ರದೇಶದ ಮಾಂಡಿ ಪಟ್ಟಣ ದಲ್ಲಿನ ಮಂಡಿ ಉತ್ಸವವು ಮಹಾ ಶಿವರಾತ್ರಿ ಆಚರಣೆಗೆ ಪ್ರಸಿದ್ಧಿಪಡೆದಿದೆ. ಈ ಪ್ರದೇಶದಲ್ಲಿ ಎಲ್ಲಾ ದೇವತೆಗಳು ನೆಲೆಸಿದ್ದಾರೆಂದು ನಂಬಲಾಗಿದೆ. ಇಲ್ಲಿ ಮಹಾ ಶಿವರಾತ್ರಿಯಂದು ದೇಶವಿದೇಶಗಳ ಜನರು ಸೇರುತ್ತಾರೆ. ಬಿಯಸ್ ನದಿಯ ದಂಡೆಯಲ್ಲಿರುವ ಮಂಡಿಯನ್ನು ಕೆಥಡ್ರಲ್ ಆಫ್ ಟೆಂಪಲ್ಸ್ ಎಂದು ಕರೆಯಲಾಗುತ್ತದೆ ಮತ್ತು ಹಿಮಾಚಲ ಪ್ರದೇಶದ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ, ಅದರ ಸುತ್ತಲಿನ ವಿವಿಧ ದೇವತೆಗಳ ಸುಮಾರು 81 ದೇವಸ್ಥಾನಗಳಿವೆ.

 

ಮಹಾ ಶಿವರಾತ್ರಿ ಕಾಶ್ಮೀರದಲ್ಲಿನ ಅತ್ಯಂತ ಪ್ರಮುಖ ಹಬ್ಬವಾಗಿದೆ. ಇಲ್ಲಿ ಶಿವ ಮತ್ತು ಪಾರ್ವತಿಗಳ ಮದುವೆಯ ವಾರ್ಷಿಕೋತ್ಸವವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಮಧ್ಯ ಭಾರತದಲ್ಲಿ ಶಿವ ಅನುಯಾಯಿಗಳು ಹೆಚ್ಚಿನ ಸಂಖ್ಯೆಯ ಲ್ಲಿದ್ದಾರೆ. ಮಹಾ ಶಿಲೇಶ್ವರ ದೇವಸ್ಥಾನ, ಶಿವನಿಗೆ ಅರ್ಪಣೆಯಾದ ಅತಿ ಪೂಜ್ಯವಾದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಮಹಾ ಶಿವರಾತ್ರಿ ದಿನದಂದು ಭಕ್ತರ ದೊಡ್ಡ ಸಮೂಹ ಪ್ರಾರ್ಥನೆ ಸಲ್ಲಿಸುತ್ತದೆ.

ಗುಜರಾತ್‌ನಲ್ಲಿ ಮಹಾಶಿವರಾತ್ರಿಯ ಮೇಳ ಜುನಾಗಡ್‌ನಲ್ಲಿ ನಡೆಯುತ್ತದೆ. ಇಲ್ಲಿ ದಾಮೋದರ ಕುಂಡದಲ್ಲಿ ಸ್ನಾನ ಮಾಡುವುದು ಪವಿತ್ರ ಎಂದು ಪರಿಗಣಿಸಲಾಗಿದೆ. ಪುರಾಣದ ಪ್ರಕಾರ ಶಿವ ಸ್ವತಃ ದಾಮೋದರ ಕುಂಡದಲ್ಲಿ ಸ್ನಾನ ಮಾಡುತ್ತಾನೆ. ಮಹಾ ಶಿವರಾತ್ರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ದೇವಾಲಯಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 

ಕರ್ನಾಟಕದ ಪ್ರಮುಖ ಶಿವ ದೇವಾಲಯಗಳು

.ಶ್ರೀ ಕ್ಷೇತ್ರ ಧರ್ಮಸ್ಥಳ

.ಕೋಲಾರದ ಕೋಟಿಲಿಂಗ ದೇವಾಲಯ

. ಮುರುಡೇಶ್ವರ

.ಗೋಕರ್ಣಧ ಆತ್ಮಲಿಂಗ ಮಹಾಬಲೇಶ್ವರ

.ನಂಜನಗೂಡು ನಂಜುಂಡೇಶ್ವರ

 

ಫಾರಿನ್ ಶಿವ ದೇಗುಲಗಳು

.ಪ್ರಂಬನಾನ್ ದೇಗುಲ, ಇಂಡೋನೇಷಿಯಾ

. ಶಿವ ವಿಷ್ಣು ದೇವಾಲಯ- ಮೇರಿಲ್ಯಾಂಡ್

.ಶಿವ ವಿಷ್ಣು ದೇವಾಲಯ, ಸೌತ್ ಫ್ಲೋರಿಡಾ

. ಜುರಿಚ್ ಶಿವ ದೇವಾಲಯ, ಸ್ವಿಡ್ಜರ್‌ರ್ಲೆಂಡ್

.ಶಿವ ಹಿಂದು ದೇವಾಲಯ, ಆಮ್‌ಸ್ಟೆರ್‌ಡಮ್

.ಶಿವ ಕೊವಿಲ್, ಲಂಡನ್

ಮದ್ಯಕೈಲಾಸ ಮಂದಿರ, ಸೌತ್ ಆಫ್ರಿಕಾ

ಪಶುಪತಿನಾಥ ದೇವಾಲಯ, ಕಠ್ಮಾಂಡು

ಕತಾಸ್ರಾಜ್ ದೇವಾಲಯ, ಪಾಕಿಸ್ತಾನ

ಮುನೇಶ್ವರ ದೇವಾಲಯ, ಶ್ರೀಲಂಕಾ

ಸಾಗರ್ ಶಿವಾ ದೇವಾಲಯ, ಮಾರಿಷಸ್

 

ವಿದೇಶದಲ್ಲೂ ಶಿವನಾಮಸ್ಮರಣೆ!

ಪಶುಪತಿನಾಥ ದೇವಸ್ಥಾನದಲ್ಲಿ ಗಾಂಜಾ ಟೀ ಸೇವನೆ!: ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾ ಗುತ್ತದೆ. ಶಿವರಾತ್ರಿಯ ಹೊರತಾಗಿ ಗಾಂಜಾ ಟೀ ಸೇವಿ ಸುವುದು ಇಲ್ಲಿ ಅಕ್ರಮ. ಆದರೆ ಶಿವರಾತ್ರಿ ಯಂದು 2 ದಿನ ಯುವಕರು, ಹಿರಿಯರು ಎನ್ನದೆ ಗಾಂಜಾ ಟೀ ಸೇವಿಸುತ್ತಾರೆ.

 

ಮಾರಿಷಶ್‌ನಲ್ಲಿ ರಾತ್ರಿಇಡೀ ಶಿವನ ಧ್ಯಾನ: ಮಹಾ ಶಿವರಾತ್ರಿಯಂದು ಸಾವಿರಾರು ಭಕ್ತರು ಸರೋವರವೊಂದರ ನೀರನ್ನು ‘ಗಂಗಾ ತಲಾವೊ’ನಲ್ಲಿ ಸಂಗ್ರಹಿಸುತ್ತಾರೆ. ಆ ಪವಿತ್ರ ಜಲವನ್ನು ಮನೆಗೆ ಕೊಂಡೊಯ್ಯುತ್ತಾರೆ. ಆ ದಿನ ರಾತ್ರಿಇಡೀ ಶಿವನ ಧ್ಯಾನವನ್ನು ನಡೆಸುತ್ತಾರೆ.

ಬಾಂಗ್ಲಾದಲ್ಲಿ ಶಕ್ತಿಪೀಠ ದೆದುರು ಜಪಬಾಂಗ್ಲಾದೇಶದಲ್ಲೂ ಕೂಡ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಚಂದ್ರನಾಥ ಧಾಮ ಹಿಂದುಗಳ ಪವಿತ್ರ ಶಕ್ತಿ ಪೀಠ. ಮಹಾಶಿವರಾತ್ರಿಯಂದು ಉಪವಾಸ ಮಾಡಿ ಭಕ್ತಿಯಿಂದ ಪೂಜಿಸುವುದರಿಂದ ಒಳ್ಳೆಯ ಸಂಗಾತಿ ಸಿಗುತ್ತಾರೆ ಎಂದೇ ನಂಬಲಾಗುತ್ತದೆ.

Follow Us:
Download App:
  • android
  • ios