ಶಿರೂರು ಮಠ ಪೊಲೀಸರ ವಶಕ್ಕೆ
ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಹಿನ್ನೆಲೆಯಲ್ಲಿ ಶ್ರೀಗಳು ಅಸ್ವಸ್ಥರಾದ ಶಿರೂರಿನ ಮೂಲ ಮಠ ಹಾಗೂ ರಥಬೀದಿಯ ಶಿರೂರು ಮಠವನ್ನು ತನಿಖೆ ಮುಗಿಯುವವರೆಗೆ ಪೊಲೀಸರು ಸ್ವಾಧೀನಪಡಿಸಿಕೊಳ್ಳಲಿದ್ದಾರೆ.
ಮಂಗಳೂರು : ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಹಿನ್ನೆಲೆಯಲ್ಲಿ ಶ್ರೀಗಳು ಅಸ್ವಸ್ಥರಾದ ಶಿರೂರಿನ ಮೂಲ ಮಠ ಹಾಗೂ ರಥಬೀದಿಯ ಶಿರೂರು ಮಠವನ್ನು ತನಿಖೆ ಮುಗಿಯುವವರೆಗೆ ಪೊಲೀಸರು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಅಷ್ಟ ಮಠಗಳ ಇತಿಹಾಸದಲ್ಲೇ ಖಾಕಿಧಾರಿಗಳ ಪ್ರವೇಶ ಇದೇ ಮೊದಲು.
ಅದೂ ಸ್ವಾಮೀಜಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ. ವಿಷ ಪ್ರಾಶನದಿಂದ ಸಾವು ಸಂಭವಿಸಿದೆ ಎಂಬ ದೂರಿನ ಆಧಾರದಲ್ಲಿ ಈ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಎರಡೂ ಮಠಗಳಲ್ಲಿರುವ ಸೊತ್ತುಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಪೊಲೀಸರ ತನಿಖೆ ಮುಗಿಯುವವರೆಗೆ ಯಾರೂ ಮಠವನ್ನು ಅಪ್ಪಣೆಯಿಲ್ಲದೆ ಪ್ರವೇಶಿಸುವಂತಿಲ್ಲ. ತೀರಾ ಅಗತ್ಯ ಇದ್ದವರನ್ನು ಮಾತ್ರ ಪರಿಶೀಲನೆ ನಡೆಸಿ ಬಿಡಲಾಗುತ್ತದೆ ಎಂದು ಉಡುಪಿ ಎಎಸ್ಪಿ ಕುಮಾರಚಂದ್ರ ತಿಳಿಸಿದ್ದಾರೆ.
ವರದಿ ಬಂದಿಲ್ಲ: ಪಾರ್ಥಿವ ಶರೀರದ ಪೋಸ್ಟ್ ಮಾರ್ಟಂ ವರದಿ ಇನ್ನೂ ಬಂದಿಲ್ಲ. ವಿಧಿವಿಜ್ಞಾನ ಪ್ರಯೋಗದ ವರದಿ ಬರಲು ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗಬಹುದು. ಅದಕ್ಕೂ ಮೊದಲು ಪೊಲೀಸ್ ತನಿಖೆ ಆರಂಭವಾಗಲಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಶಿರೂರು ಮೂಲ ಮಠದಲ್ಲಿ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.