ಬಿಜೆಪಿ ಸೋಲಿಸಲು ಬಿಜೆಪಿ ಮುಖಂಡನಿಂದಲೇ ಕರೆ
ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಫೇಲ್ ಡೀಲ್ ನಲ್ಲಿ ಭಾರೀ ಅಕ್ರಮ ನಡೆಸಿದೆ ಎಂದಿದ್ದಾರೆ.
ಮುಜಾಫರ್ ನಗರ : ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಮತ್ತೊಮ್ಮೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಫೇಲ್ ಡೀಲ್ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ ಅವರು ರಿಲಾಯನ್ಸ್ ಸಹಭಾಗಿತ್ವದಲ್ಲಿ ರಫೇಲ್ ಡೀಲ್ ಮಾಡಿಕೊಂಡಿದ್ದಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲಾಂಡೆ ಅವರೇ ಒಪ್ಪಿಕೊಂಡಿದ್ದಾರೆ. ಈ ಒಪ್ಪಂದದ ಮೂಲಕ ಭಾರೀ ಅಕ್ರಮ ಎಸಗಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ತಾವ್ಲಿ ಹಳ್ಳಿಯಲ್ಲಿ ರೈತ ಪಂಚಾಯತ್ ಉದ್ಘಾಟಿಸಿ ಮಾತನಾಡಿದ ಅವರು ಹೆಚ್ಚು ಸಾಮರ್ಥ್ಯ ಹೊಂದಿದ ಎಚ್ ಎಎಲ್ ಗೆ ಯಾಕೆ ಇದರ ಡೀಲ್ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಮಣಿಸಬೇಕು ಎಂದೂ ಕೂಡ ಕರೆ ನೀಡಿದ್ದಾರೆ.
ರೈತ ಪಂಚಾಯತ್ ನಲ್ಲಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹಾಗೂ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೂ ಕೂಡ ಪಾಲ್ಗೊಂಡಿದ್ದರು.