ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಶಶಿಕಲಾ ಜೈಲಿನಲ್ಲಿ ವಿರಾಜಮಾನರಾಗಿದ್ದಾರೆ. ಜೈಲಿನಲ್ಲಿ ಕುಳಿತೇ ಇಡೀ ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನೇ ಶಶಿಕಲಾ ನಿಯಂತ್ರಿಸುತ್ತಿದ್ದಾರೆ. ಜೈಲಿನ ಯಾವ ನಿಯಮಗಳೂ ಶಶಿಕಲಾಗೆ ಅನ್ವಯವಾಗುತ್ತಿಲ್ಲ. ಹೀಗಂದಿದ್ದು ದಾಖಲೆಗಳೇ ಹೇಳುತ್ತಿವೆ.
ಬೆಂಗಳೂರು(ಎ.06): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಶಶಿಕಲಾ ಜೈಲಿನಲ್ಲಿ ವಿರಾಜಮಾನರಾಗಿದ್ದಾರೆ. ಜೈಲಿನಲ್ಲಿ ಕುಳಿತೇ ಇಡೀ ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನೇ ಶಶಿಕಲಾ ನಿಯಂತ್ರಿಸುತ್ತಿದ್ದಾರೆ. ಜೈಲಿನ ಯಾವ ನಿಯಮಗಳೂ ಶಶಿಕಲಾಗೆ ಅನ್ವಯವಾಗುತ್ತಿಲ್ಲ. ಹೀಗಂದಿದ್ದು ದಾಖಲೆಗಳೇ ಹೇಳುತ್ತಿವೆ.
ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಮಿಳುನಾಡಿನ ಪಾಲಿಗೆ ಸೂಪರ್ ಸಿಎಂ. ತಮಿಳುನಾಡಿಗೆ ಪಳನಿಸ್ವಾಮಿ ಹೆಸರಿಗಷ್ಟೇ ಸಿಎಂ ಆಗಿದ್ದರೆ, ಎಲ್ಲವೂ ನಿಯಂತ್ರಿತವಾಗುವುದು ಇಲ್ಲಿಂದಲೇ. ಸರ್ಕಾರ ನಡೆಸಲು ಆಯಕಟ್ಟಿನ ಜಾಗಗಳಲ್ಲಿ ತನ್ನ ಹಿಂಬಾಲಕರನ್ನು ಇಟ್ಟಿರುವ ಶಶಿಕಲಾ ಅವರನ್ನ ತಾನಿರುವ ಜೈಲಿನಲ್ಲಿ ಪದೇ ಪದೇ ಭೇಟಿಯಾಗಿ ಸೂಚನೆಗಳನ್ನ ಕೊಡುತ್ತಿದ್ದಾರೆ. ಶಶಿಕಲಾ ಸೇವೆಗೆ ನಿಂತಿರುವ ಜೈಲು ಅಧಿಕಾರಿಗಳು ಆಕೆಯ ಅಧಿಪತ್ಯಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹಣ, ಪ್ರಭಾವ ಎಷ್ಟರಮಟ್ಟಿಗೆ ಜೈಲಿನಲ್ಲಿ ಕೆಲಸ ಮಾಡುತ್ತಿದೆ ಅಂದ್ರೆ ಇಲ್ಲಿ ನಿಯಮಗಳು ಲೆಕ್ಕಕ್ಕೇ ಇಲ್ಲ.
ಒಂದು ತಿಂಗಳಲ್ಲಿ 28 ಜನರನ್ನ ಭೇಟಿಯಾದ ಶಶಿಕಲಾ..!: ನಿಯಮಗಳ ಪ್ರಕಾರ ತಿಂಗಳಿಗೆ ಎರಡು ಭೇಟಿಗಷ್ಟೇ ಅವಕಾಶ..!
ಫೆಬ್ರವರಿ 16 ರಿಂದ ಮಾರ್ಚ್ 18 ರ ವರೆಗಿನ 31 ದಿನಗಳ ಅಂತರದಲ್ಲಿ ಶಶಿಕಲಾ ಜೈಲಿನಲ್ಲಿ 28 ಜನರನ್ನ ಭೇಟಿಯಾಗಿದ್ದಾರೆ. ನಿಯಮಗಳ ಪ್ರಕಾರ ಹದಿನೈದು ದಿನಕ್ಕೆ ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರಿಗೆಂದು ಒಂದು ಬಾರಿ ಭೇಟಿ ಮಾಡುವ ಅವಕಾಶವಷ್ಟೇ ಇದೆ. ಆದರೆ ಶಶಿಕಲಾ ಒಂದು ತಿಂಗಳ ಅವಧಿಯಲ್ಲಿ 14 ಬಾರಿ 28 ಜನರನ್ನ ಭೇಟಿಯಾಗಿದ್ದಾರೆ. ನಿಯಮದ ಪ್ರಕಾರ ಬೆಳಗ್ಗೆ ಹನ್ನೊಂದರಿಂದ ಸಂಜೆ ಐದು ಗಂಟೆಯವರೆಗೆ ಮಾತ್ರ ಕೈದಿಗಳನ್ನ ಭೇಟಿ ಮಾಡಬೇಕು. ಆದರೆ ಈ ಸಮಯ ಮುಗಿದ ಬಳಿಕವೂ ಶಶಿಕಲಾ ಭೇಟಿಗೆ ಹಲವರಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಸುವರ್ಣ ನ್ಯೂಸ್ ಗೆ ಸಿಕ್ಕ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಅರ್ಥವಾಯ್ತಲ್ಲ ನಮ್ಮ ಜೈಲಧಿಕಾರಿಗಳು ಎಷ್ಟು ಪ್ರಾಮಾಣಿಕವಾಗಿದ್ದಾರೆ ಅಂತ. ಜೈಲಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ ಎನ್ನುವ ವ್ಯವಸ್ಥೆ ಇರುವಾಗ ಶಶಿಕಲಾಗೆ ಇಷ್ಟೆಲ್ಲ ವ್ಯವಸ್ಥೆ ಸಿಗದೇ ಇರುತ್ತಾ?
ಈ ಹಿಂದೆ ಜಯಲಲಿತಾ ಜೈಲು ಸೇರಿದಾಗ ಅವರಿಗೂ ನಮ್ಮ ಜೈಲಿನ ಅಧಿಕಾರಿಗಳು ಇದೇ ರೀತಿ ವಿವಿಐಪಿ ಟ್ರೀಟ್ ಮೆಂಟ್ ನೀಡಿ ಧನ್ಯರಾಗಿದ್ದರು. ಈಗ ಶಶಿಕಲಾ ಅವರ ಸರದಿ. ನಾವು ದಾಖಲೆ ಸಮೇತ ತೋರಿಸಿದ ಈ ಕರ್ಮಕಾಂಡಕ್ಕೆ ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ, ಅಷ್ಟೇ ಅಲ್ಲ ಶಶಿಕಲಾಗೆ ವಿವಿಐಪಿ ಟ್ರೀಟ್ಮೆಂಟ್ ಕೊಡುತ್ತಿರುವ ಜೈಲಿನ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಹಾಗಾದ್ರೆ ಮಾತ್ರ ಪೊಲೀಸ್ ಇಲಾಖೆ ಮರ್ಯಾದೆ ಉಳಿಯುತ್ತದೆ.
