ನಾರದ ಸ್ಟಿಂಗ್ ಆಪರೇಶನ್ ತನಿಖೆ ರದ್ದುಗೊಳಿಸಲು ಸುಪ್ರೀಂ ನಕಾರ; ಟಿಎಂಸಿಗೆ ಹಿನ್ನೆಡೆ
ನಾರದ ಸ್ಟಿಂಗ್ ಆಪರೇಶನ್ ತನಿಖೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಇದರಿಂದ ತೃಣಮೂಲ ಕಾಂಗ್ರೆಸ್ ಗೆ ಹಿನ್ನೆಡೆಯಾಗಿದೆ.
ನವದೆಹಲಿ (ಮಾ.21): ನಾರದ ಸ್ಟಿಂಗ್ ಆಪರೇಶನ್ ತನಿಖೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಇದರಿಂದ ತೃಣಮೂಲ ಕಾಂಗ್ರೆಸ್ ಗೆ ಹಿನ್ನೆಡೆಯಾಗಿದೆ.
ಪಶ್ಚಿಮ ಬಂಗಾಳದಲ್ಲಿ 2016 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಟಿಎಂಸಿ ಹಿರಿಯ ನಾಯಕರು ಅಕ್ರಮವಾಗಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನಲಾದ ನಾರದ ಸ್ಟಿಂಗ್ ಟೇಪನ್ನು ಕೆಲವು ಸುದ್ಧಿ ಸಂಸ್ಥೆಗಳು ಬಿಡುಗಡೆಗೊಳಿಸಿತ್ತು. ಈ ಸ್ಟಿಂಗ್ ಆಪರೇಶನ್ ಬಗ್ಗೆ ತನಿಖೆ ನಡೆಸುವಂತೆ ಪಶ್ಚಿಮ ಬಂಗಾಳ ಹೈಕೋರ್ಟ್ ಸಿಬಿಐಗೆ ನಿರ್ದೇಶಿಸಿತ್ತು.
ಈ ತನಿಖೆಯನ್ನು ರದ್ದುಗೊಳಿಸುವಂತೆ ಟಿಎಂಸಿ ಮುಖಂಡ ಸುವೆಂದು ಅಧಿಕಾರಿ ಮತ್ತು ಸೌಗತ ರಾಯ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸಿಬಿಐ ನಡೆಸುತ್ತಿರುವ ತನಿಖೆಯನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದೂ ಅರ್ಜಿಯಲ್ಲಿ ಕೋರಿದ್ದರು. ಇಂದು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.