ನನ್ನ ಜೀವಿತಾವಧಿಯಲ್ಲಿ ಈ ಕೆಲಸ ಸಾಧ್ಯವಿಲ್ಲ : ಎಚ್ ಡಿಡಿ
ಕರ್ನಾಟಕವನ್ನು ಒಡೆದು ಪ್ರತ್ಯೇಕ ರಾಜ್ಯವಾಗಿಸಲು ಬಿಎಸ್ ಯಡಿಯೂರಪ್ಪ ಪ್ರಚೋದನೆ ಮಾಡುತ್ತಿದ್ದಾರೆ. ನನ್ನ ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ಇದು ಸಾಧ್ಯವಿಲ್ಲ ಎಂದು ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ನವದೆಹಲಿ: ಉತ್ತರ ಕರ್ನಾಟಕದ ಜನತೆ ಬಿಜೆಪಿಯ ಪ್ರಚೋದನೆಗೆ ಒಳಗಾಗಬಾರದು, ತಾವು ಹಾಗೂ ತಮ್ಮ ಪುತ್ರ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೀವಿತಾವಧಿ ಯಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಲಾರದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿ ದ್ದಾರೆ.
ರಾಜ್ಯ ಬಜೆಟ್ ಅನುದಾನ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಯಡಿಯೂರಪ್ಪ ಸೃಷ್ಟಿಸಿರುವ ಪ್ರಚೋದನೆ ನಿಜವಾಗುವುದಿಲ್ಲ. ಕೆಲವು ಜನರು ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕೆಂದು ಬಯಸಿದರೆ, ನನ್ನ ಮತ್ತು ನನ್ನ ಜೀವಿತಾವಧಿಯಲ್ಲಿ ಅದು ಆಗುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ದೇವೇಗೌಡರು ಸಂದರ್ಶ ವೊಂದರಲ್ಲಿ ಹೇಳಿದ್ದಾರೆ.
ಉ. ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಪ್ರಚೋದಿಸುತ್ತಿದ್ದಾರೆ. ಹೆಚ್ಚು ಸ್ಥಾನ ಗೆದ್ದರೂ ಸರ್ಕಾರ ರಚಿಸಲಾಗದ ಕೋಪ ಅವರಲ್ಲಿ ಇನ್ನೂ ಕಡಿಮೆಯಾಗಿಲ್ಲ ಎಂದು ಗೌಡರು ತಿಳಿಸಿದ್ದಾರೆ. ರೈತರ ಸಾಲಮನ್ನಾ, ರಾಜ್ಯ ಬಜೆಟ್ ಮತ್ತಿತರ ವಿಷಯಗಳಲ್ಲಿ ಯಡಿಯೂರಪ್ಪ ಜನರನ್ನು ಬೆದರಿಸಲು ಆರಂಭಿಸಿದ್ದಾರೆ. ಅಶಾಂತಿ ಸೃಷ್ಟಿಸುವುದಷ್ಟೇ ಅವರ ಉದ್ದೇಶವಾಗಿದೆ. ಕುಮಾರಸ್ವಾಮಿ ಅವರು ಈಗಾಗಲೇ ಎರಡು ಪ್ರಮುಖ ಸರ್ಕಾರಿ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾಯಿಸಲು ಆದೇಶಿಸಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.