ಡಾ. ರಾಜ್ ರಿಂದ ಕಲಿತ ಪಾಠ ಬಾಳ್ ಠಾಕ್ರೆಗೆ ಸಹಾಯವಾಯಿತು
- ಡಾ.ರಾಜ್ ಸಾವಿನಿಂದ ಉಂಟಾದ ಗಲಭೆಯಿಂದ ಎಚ್ಚೆತ್ತ ಕೇಂದ್ರ ಗೃಹ ಇಲಾಖೆ
- ಠಾಕ್ರೆ ಮರಣದ ಸಮಯದಲ್ಲಿ ಗಲಾಟೆ ನಿಯಂತ್ರಣ
ಯಾರಾದರೂ ಒಬ್ಬ ಜನಪ್ರಿಯ ವ್ಯಕ್ತಿ ಸೀರಿಯಸ್ ಆದರೆಂದರೆ ಅತೀ ಹೆಚ್ಚು ಕೆಲಸ ಬೀಳುವುದು ಪೊಲೀಸರ ಮೇಲೆ. ಕೇಂದ್ರ ಗ್ರಹ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಡಾ. ರಾಜಕುಮಾರ್ ಮರಣದ ವೇಳೆ ನಡೆದ ಗಲಭೆಯ ನಂತರ ದೇಶದಲ್ಲಿ ಜನಪ್ರಿಯ ವ್ಯಕ್ತಿಗಳು ಆಸ್ಪತ್ರೆ ಸೇರಿದಾಗಲೇ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರೊಟೋಕಾಲ್ ಜಾರಿಗೆ ತರಲಾಯಿತಂತೆ. ರಾಜಕುಮಾರ್ ಮರಣದ ನಂತರದ ಗಲಭೆಯಿಂದ ಪಾಠ ಕಲಿತು ಬಾಳಾಠಾಕ್ರೆ ಆಸ್ಪತ್ರೆಯಲ್ಲಿದ್ದ ಸಮಯ ಮತ್ತು ನಿಧನದ ನಂತರ ಒಂದೂ ಗಲಾಟೆಗೆ ಅಸ್ಪದವಾಗದಂತೆ ಎಲ್ಲವನ್ನೂ ನಿಯಂತ್ರಿಸಲಾಯಿತಂತೆ.
ಅಂಗಡಿ ವಿರುದ್ಧ ಸಾಹುಕಾರರು
ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಯಾವುದೇ ಕಾರಣಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಸ್ಥಳೀಯ ಶಾಸಕರು ಹೈಕಮಾಂಡ್ವರೆಗೆ ಬಂದು ದೂರು ಹೇಳಿ ಹೋಗಿದ್ದಾರೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ದಿಲ್ಲಿಗೆ ಬಂದು ಹೈಕಮಾಂಡ್ ನಾಯಕರಿಗೆ ಸುರೇಶ ಅಂಗಡಿಗೆ ಟಿಕೆಟ್ ಕೊಟ್ಟರೆ ಸೋಲೋದು ನಿಕ್ಕಿ ಎಂದು ಹೇಳಿ ಹೋಗಿದ್ದು, ಇದಕ್ಕೆ ಉಳಿದ ಶಾಸಕರೂ ಕೈಜೋಡಿಸಿದರೆ ಸುರೇಶ ಅಂಗಡಿ ಪಾಲಿಟಿಕ್ಸ್ ಕಷ್ಟವಾಗಬಹುದು. ಆದರೆ ಅಂಗಡಿ ಸಾಹೇಬರಿಗೆ ಬೀಗರಾದ ಜಗದೀಶ ಶೆಟ್ಟರ್ ಬೆಂಬಲ ಇದ್ದಹಾಗಿದೆ.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]