ರಮ್ಯಾಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಧಾನಿ ವಿರುದ್ಧ ಅವಮಾನಕಾರಿಯಾದ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹದ ಕೇಸ್ ದಾಖಲು ಮಾಡಲಾಗಿದೆ.
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಮೇಣದ ಪ್ರತಿಮೆ ಮೇಲೆ ‘ಚೋರ್’ ಎಂದು ಬರೆಯುತ್ತಿರುವಂತೆ ತೋರಿಸಲಾದ ತಿರುಚಿದ ಚಿತ್ರ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಾ ಸ್ಪಂದನಾ(ರಮ್ಯಾ) ವಿರುದ್ಧ ರಾಷ್ಟ್ರದ್ರೋಹದ ಕೇಸ್ ದಾಖಲಾಗಿದೆ.
ಈ ಬಗ್ಗೆ ಬುಧವಾರ ಪ್ರಕರಣ ದಾಖಲಿಸಿದ ಬಳಿಕ ಮಾತನಾಡಿದ ವಕೀಲ ಸೈಯ್ಯದ್ ರಿಜ್ವಾನ್ ಅಹಮದ್, ‘ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ಚಿತ್ರದ ಹಣೆ ಮೇಲೆ ಮೋದಿ ಅವರೇ ಹೋಲುವ ಮತ್ತೊಬ್ಬರು ಚೋರ್(ಕಳ್ಳ) ಎಂದು ಬರೆದಿರುವ ಚಿತ್ರವನ್ನು ದಿವ್ಯಾ ಸ್ಪಂದನಾ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಪ್ರಧಾನಿ ಘನತೆಗೆ ಚ್ಯುತಿ ತಂದಿದ್ದಾರೆ,’ ಎಂದು ದೂರಿದ್ದಾರೆ. ಇಂಥ ಕೃತ್ಯದ ಮೂಲಕ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಿಂದ ಆಯ್ಕೆಯಾದ ಪ್ರಧಾನಿಯನ್ನು ಅಪಮಾನಿಸಲಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.