ಹೊರ ರಾಜ್ಯಗಳ ಯೋಧರ ಕರೆಸಿದ್ದೇಕೆ?| ಸ್ಥಳೀಯರು ಪೊಲೀಸರು ಕೇಂದ್ರದ ವಿರುದ್ಧ ಸಿಡಿದೇಳುವ ಭೀತಿ!

ಶ್ರೀನಗರ[ಆ.06]: ಜಮ್ಮು ಮತ್ತು ಕಾಶ್ಮೀರ ಸಂಬಂಧ ಮಹತ್ವದ ನಿರ್ಧಾರಕ್ಕೆ ಬಂದಿದ್ದ ಕೇಂದ್ರ ಸರ್ಕಾರ, ಅದನ್ನು ಘೋಷಿಸುವ ಮೊದಲು ಕಣಿವೆ ರಾಜ್ಯಕ್ಕೆ 35000ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿತ್ತು. ಈಗಾಗಲೇ ಕಾಶ್ಮೀರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯೋಧರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾದರೂ ಏಕೆ ಎಂಬ ಪ್ರಶ್ನೆ ಏಳುವುದು ಸಹಜ. ಅದಕ್ಕೂ ಒಂದೂ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಸಂವಿಧಾನದ 370 ಮತ್ತು 35ಎ ವಿಧಿ ಕಾಶ್ಮೀರಿಗಳ ಪಾಲಿಗೆ ಭಾವನಾತ್ಮಕ ವಿಷಯ. ಅದನ್ನೇ ರದ್ದುಪಡಿಸಿದಲ್ಲಿ ಕಾಶ್ಮೀರಿಗಳು ಸಹಜವಾಗಿಯೇ ಆಕ್ರೋಶಕ್ಕೆ ತುತ್ತಾಗುತ್ತಾರೆ. ಆದರೆ ಅವರನ್ನು ನಿಗ್ರಹಿಸಲು ಇರುವ ರಾಜ್ಯ ಪೊಲೀಸ್‌ ಪಡೆಯಲ್ಲಿ ಹೆಚ್ಚಿನವರು ಸ್ಥಳೀಯರು. ಒಂದು ವೇಳೆ ಅವರು ಕೂಡಾ ಸರ್ಕಾರದ ನೀತಿ ವಿರುದ್ಧ ತಿರುಗಿ ಬಿದ್ದರೆ, ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದ್ದೇ ಇರುತ್ತದೆ. ಜನರನ್ನು ನಿಯಂತ್ರಿಸುವುದಕ್ಕಿಂತ ಸಶಸ್ತ್ರ ಪೊಲೀಸರನ್ನು ನಿರ್ವಹಿಸುವುದು ಸೇನೆ ಪಾಲಿಗೂ ಕಷ್ಟವೇ ಸರಿ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದನ್ನು ಊಹಿಸಿದ್ದ ಕೇಂದ್ರ ಸರ್ಕಾರ, ಒಂದು ವಾರ ಮೊದಲೇ 10000 ಯೋಧರನ್ನು ದೇಶದ ವಿವಿಧ ಅರೆಸೇನಾಪಡೆಗಳಿಂದ ಆಯ್ದು ಕಾಶ್ಮೀರಕ್ಕೆ ರವಾನಿಸಿತ್ತು. ಬಳಿಕ ಮತ್ತೆ 28000 ಯೋಧರನ್ನು ನಿಯೋಜಿಸಿತು. ಅಂತಿಮ ಹಂತದಲ್ಲಿ ಮತ್ತೆ ನೆರೆಯ ರಾಜ್ಯಗಳಿಂದ 8000 ಯೋಧರನ್ನು ಕರೆಸಿಕೊಳ್ಳುವ ಮೂಲಕ ಇಡೀ ಪ್ರದೇಶದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತು.