ಮುಗಿದ ರಜೆ : ನಾಳೆಯಿಂದ ಶಾಲೆ ಶುರು
ದೀರ್ಘ ಬೇಸಿಗೆ ರಜೆ ಬಳಿಕ 2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳು ಮಂಗಳವಾರ (ಮೇ 29 )ದಿಂದ ಆರಂಭಗೊಳ್ಳಲಿವೆ. ಮೇ 28 ರಂದು ಶಾಲೆಗಳಿಗೆ ಶಿಕ್ಷಕರು ಮತ್ತು ಅಧಿಕಾರಿಗಳು ಆಗಮಿಸಿ ಶಾಲಾ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕೃತವಾಗಿ ತರಗತಿಗಳು ಮೇ 29 ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.
ಬೆಂಗಳೂರು : ದೀರ್ಘ ಬೇಸಿಗೆ ರಜೆ ಬಳಿಕ 2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳು ಮಂಗಳವಾರ (ಮೇ 29 )ದಿಂದ ಆರಂಭಗೊಳ್ಳಲಿವೆ. ಮೇ 28 ರಂದು ಶಾಲೆಗಳಿಗೆ ಶಿಕ್ಷಕರು ಮತ್ತು ಅಧಿಕಾರಿಗಳು ಆಗಮಿಸಿ ಶಾಲಾ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕೃತವಾಗಿ ತರಗತಿಗಳು ಮೇ 29 ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಎಂ.ಟಿ.ರೇಜು
ತಿಳಿಸಿದ್ದಾರೆ.
ಶಾಲೆ ಆರಂಭಕ್ಕೂ ಮುನ್ನ ಶಾಲಾ ಸ್ವಚ್ಛತೆ, ವೇಳಾಪಟ್ಟಿ, ಶಾಲಾ ಅಭಿವೃದ್ಧಿ ಯೋಜನೆ ಕುರಿತು ಆಡಳಿತ ಮಂಡಳಿಯು ಸಂಪೂರ್ಣ ಆಸಕ್ತಿ ವಹಿಸಬೇಕು. ಶಾಲಾ ಪ್ರಾರಂಭೋತ್ಸವವನ್ನು ಒಂದು ಯಾಂತ್ರಿಕ ಪ್ರಕ್ರಿಯೆ ಎಂದು ಪರಿಗಣಿಸದೆ ಉತ್ಸಾಹದಿಂದ ಪಾಲ್ಗೊಳ್ಳಬೇಕು.
ಶಾಲಾ ಕಟ್ಟಡಗಳನ್ನು ತಳಿರು- ತೋರಣಗಳಿಂದ ಸಿಂಗರಿಸಿ ಶಾಲೆ ಆರಂಭವನ್ನು ಯುಗಾದಿ ಹಬ್ಬದಂತೆ ಆಚರಿಸಲು ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ‘ಮಿಂಚಿನ ಸಂಚಾರ’ ಎಂಬ ಶೀರ್ಷಿಕೆಯಲ್ಲಿ 33 ಅಂಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಆ ಪ್ರಕಾರವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ತಿಳಿಸಲಾಗಿದೆ. ಶಾಲಾ ಪ್ರಾರಂಭೋತ್ಸವ ಮುಗಿದ ಬಳಿಕ ಕ್ರೋಢೀಕೃತ ವರದಿಯನ್ನು ಜಿಲ್ಲಾ ಉಪನಿರ್ದೇಶಕರು ಜೂ.10 ರೊಳಗೆ ಆಯುಕ್ತರ ಕಚೇರಿಗೆ ಕಳುಹಿಸಬೇಕೆಂದು ಡಾ.ಎಂ.ಟಿ. ರೇಜು ಸೂಚನೆ ನೀಡಿದ್ದಾರೆ. ಶಾಲಾ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ಸಲಹೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಬೇಸಿಗೆ ರಜೆಯ ಮೂಡಿನಲ್ಲಿರುವ ಮಕ್ಕಳನ್ನು ಶಾಲೆಗೆ ಕರೆತರುವ ವಾತಾವರಣ ನಿರ್ಮಿಸಬೇಕು.
ಹೊಸದಾಗಿ ದಾಖಲಾಗುವ ಮಕ್ಕಳು ತಾಯಿಯ ಮಡಿಲಿನಿಂದ, ತಾಯಿಯ ಕೈತುತ್ತನ್ನು ಬಿಟ್ಟು ಹೊಸ ಜಾಗ, ಪರಿಸರಕ್ಕೆ ಹೊಂದಿ ಕೊಳ್ಳಬೇಕಾಗುತ್ತದೆ. ಹೀಗಾಗಿ, ಶಾಲೆಯ ಮೊದಲ ದಿನ ಆಕರ್ಷಕವಾಗಿ, ಖುಷಿ ಖುಷಿಯಾಗಿರಲಿ. ವಿಶಿಷ್ಟ, ವಿನೂತನ ಶಾಲಾ ಪ್ರಾರಂಭೋತ್ಸವಕ್ಕೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ಡಿಎಂಸಿ, ಪಾಲಕರು ಹಾಗೂ ಊರಿನವರು ಶ್ರಮ, ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಿಹಿ ಊಟ ನೀಡಿ: ನಾಡಿಗೆ ಯುಗಾದಿ ಹೊಸ ವರ್ಷದ ಹಬ್ಬ. ಆದರೆ, ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಮತ್ತು ಶಿಕ್ಷಕರಿಗೆ ಮಕ್ಕಳನ್ನು ಶಾಲೆಗೆ ಆಹ್ವಾನಿಸುವುದೇ ಹಬ್ಬವಾಗಲಿ. ಶಾಲೆಗೆ ಮಕ್ಕಳು ಬರುವ ಮುನ್ನ ಶಿಕ್ಷಕರು ಶಾಲೆಗೆ ತಳಿರು ತೋರಣಗಳಿಂದ ಸಿಂಗರಿಸಬೇಕು.
ಮಕ್ಕಳಿಗೆ ಹೂ ನೀಡಿ ಬರಮಾಡಿಕೊಳ್ಳಬೇಕು. ಸಾಧ್ಯವಾದರೆ, ಮಧ್ಯಾಹ್ನದ ಬಿಸಿಯೂಟದ ಜತೆಗೆ ಪಾಯಸ, ಗೋಧಿ ಹುಗ್ಗಿ, ಹಪ್ಪಳ, ಸಂಡಿಗೆ ಬಡಿಸಿ ಮಕ್ಕಳು ಮೊದಲ ದಿನ ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಸಲಹೆ ನೀಡಿದ್ದಾರೆ.