ನ್ಯಾ| ಜಯಂತ್ ಪಟೇಲ್ ವರ್ಗ ಸುಪ್ರೀಂ ಅಂಗಳಕ್ಕೆ
ವರ್ಗ ಅಸಾಂವಿಧಾನಿಕ ಎಂದು ಘೋಷಿಸಲು ಕೋರಿ ಅರ್ಜಿ
ನವದೆಹಲಿ: ಕರ್ನಾಟಕದ ಹಿರಿಯ ನ್ಯಾಯಮೂರ್ತಿಯಾಗಿದ್ದ ಜಯಂತ್ ಪಟೇಲ್ ಅವರನ್ನು ವರ್ಗಾವಣೆಗೊಳಿಸುವ ಪ್ರಸ್ತಾವ ಹಾಗೂ ಅದರ ವಿರುದ್ಧ ಬೇಸರಗೊಂಡು ನ್ಯಾ| ಜಯಂತ್ ಅವರು ರಾಜೀನಾಮೆ ನೀಡಿದ ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ನ್ಯಾ| ಜಯಂತ್ ಅವರನ್ನು ಕರ್ನಾಟಕ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಿದ್ದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬ ಕೋರಿಕೆಯನ್ನು ಗುರುವಾರ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಂಗ ಪಾರದರ್ಶಕತೆ ಹಾಗೂ ಸುಧಾರಣೆ ಕುರಿತ ರಾಷ್ಟ್ರೀಯ ವಕೀಲರ ಆಂದೋಲನ ಎಂಬ ಸಂಘಟನೆಯ ಕಾರ್ಯದರ್ಶಿ ಎ.ಸಿ. ಫಿಲಿಪ್ ಅವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
ಅದರ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ವಕೀಲ ಮ್ಯಾಥ್ಯೂಸ್ ಜೆ.ನೆಡುಂಪಾರಾ ಅವರು ಗುರುವಾರ ವಾದಿಸಿದರು. ಆದರೆ ಈ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು.
ಸಂಬಂಧಿತ ಹೈಕೋರ್ಟ್ನಿಂದ ಮಾಹಿತಿ ಪಡೆದೇ ವಿವೇಚಾಯುತ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಕೋರಿಕೆಯನ್ನು ಸುಪ್ರೀಂಕೋರ್ಟಿನಲ್ಲಿ ಅರ್ಹತೆ ಪಡೆದ ಹಿರಿಯ ವಕೀಲರಷ್ಟೇ ಇಡಬಹುದು. ಹೀಗಾಗಿ ನೀವು ಹೊರಡಿ ಎಂದು ನೆಡುಂಪಾರಾ ಅವರಿಗೆ ಕೋರ್ಟ್ ತಾಕೀತು ಮಾಡಿತು.