ವಿಶ್ವಾಸಮತ ಯಾಚನೆ ಅರ್ಜಿ: ಪಕ್ಷೇತರ ಶಾಸಕರ ವಿರುದ್ಧ ಸುಪ್ರೀಂ ಕಿಡಿ!
ವಿಶ್ವಾಸಮತ ಯಾಚನೆ ಕೋರಿ, ಸುಪ್ರೀಂನಲ್ಲಿ ಪಕ್ಷೇತರ ಶಾಸಕ ನಾಗೇಶ್ ಹಾಗೂ ಕೆಪಿಜೆಪಿಯ ಶಂಕರ್ ಅರ್ಜಿ| ವಿಶ್ವಾಸಮತ ಯಾಚಿಸಿದ ಬೆನ್ನಲ್ಲೇ ಅರ್ಜಿ ವಾಪಾಸ್ ಪಡೆಯಲು ಬಂದ ಶಾಸಕರ ಪರ ವಕೀಲ| ಶಾಸಕರ ನಡೆಗೆ ಸುಪ್ರೀಂ ಕೋರ್ಟ್ ಕಿಡಿ
ನವದೆಹಲಿ[ಜು.25]: ರಾಜ್ಯದ ಮೈತ್ರಿ ಸರ್ಕಾರಕ್ಕೆ ಸೋಮವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಪಕ್ಷೇತರ ಶಾಸಕ ನಾಗೇಶ್ ಹಾಗೂ ಕೆಪಿಜೆಪಿಯ ಶಂಕರ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲು ಸುಪ್ರೀಂ ಸಮ್ಮತಿ ನೀಡಿದೆ.
"
ಪಕ್ಷೇತರ ಶಾಸಕರಾದ ಪಕ್ಷೇತರ ಶಾಸಕ ನಾಗೇಶ್ ಹಾಗೂ ಕೆಪಿಜೆಪಿಯ ಶಂಕರ್, ಸಮ್ಮಿಶ್ರ ಸರ್ಕಾರ ಸೋಮವಾರವೇ ವಿಶ್ವಾಸಮತ ಯಾಚಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೋಮವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.
ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?
ಮಂಗಳವಾರ ಸ್ಪೀಕರ್ ಪರ ವಕೀಲ ಸಿಂಘ್ವಿ ವಿಶ್ವಾಸಮತ ಯಾಚನೆ ನಡೆಸುವುದಾಗಿ ರಮೇಶ್ ಕುಮಾರ್ ಪರ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದರು. ಹೀಗಾಗಿ ಒಂದು ದಿನ ಕಾಯಬಹುದು ಎಂದು ವಿಚಾರಣೆಯನ್ನು ಮತ್ತೆ ಮುಂದೂಡಿತ್ತು. ಮಂಗಳವಾರ ಸ್ಪೀಕರ್ ಕೊಟ್ಟ ಮಾತಿನಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು. ಇದರ ಬೆನ್ನಲ್ಲೇ ಶಾಸಕರು ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಬಯಸಿದ್ದರು.
ಆದರೆ ಬುಧವಾರದಂದು ಅರ್ಜಿ ವಿಚಾರಣೆಗೆ ಬಂದಾಗ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಹಾಜರಿರಲಿಲ್ಲ. ಈ ವಿಚಾರಕ್ಕೆ ಮುಖ್ಯನ್ಯಾಯಮೂರ್ತ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.
ಉರುಳಿದ ಮೈತ್ರಿ ಸರ್ಕಾರ: ಈ ಶಾಸಕರ ಅರ್ಜಿಗಿಲ್ಲ ಸುಪ್ರೀಂನಲ್ಲಿ ಕಿಮ್ಮತ್ತು
ಇಂದು ಗುರುವಾರ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ 'ನಿಮಗೆ ಬೇಕಾದಾಗ ಮಧ್ಯರಾತ್ರಿ ಕೂಡ ವಿಚಾರಣೆ ನಡೆಸಿ ನಾವು ಆದೇಶ ನೀಡಬೇಕಾಗುತ್ತದೆ. ಆದರೆ ನಾವು ಕರೆದಾಗ ನೀವು ಬರುವುದಿಲ್ಲ' ಎಂದು ತರಾಟೆಗೆ ತೆಗೆದುಕೊಂಡಿತು. ಬಳಿಕ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಸಮ್ಮತಿ ಸೂಚಿಸಿತು.