(ವಿಡಿಯೋ)ಸೊಳ್ಳೆ ಕಾಟಕ್ಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಆಸಾಮಿ : ಜಡ್ಜ್ ಉತ್ತರ ಕೇಳಿ ತಣ್ಣಗಾದ ಪುಣ್ಯಾತ್ಮ
ವಿಶ್ವಸಂಸ್ಥೆ ಕೂಡ ಸೊಳ್ಳೆ ನಿರ್ಮೂಲನೆಗೆ ಮುಂದಾಗಿದೆ. ಆದರೆ ಸೊಳ್ಳೆ ನಿರ್ಮೂಲನೆ ಅಸಾಧ್ಯ ಎಂದೂ ಕೂಡ ತಜ್ಞರು ಸಹ ಹೇಳಿದ್ದಾರೆ.
ನವದೆಹಲಿ(ಸೆ.23): ಮನುಷ್ಯರ ರಕ್ತ ಹೀರುವ ಸೊಳ್ಳೆಗಳ ನಿರ್ಮೂಲನೆ ದೇವರಿಂದ ಮಾತ್ರ ಸಾಧ್ಯವೇ ಹೊರತು ನಮ್ಮಿಂದಲ್ಲ ಎಂದು ಸುಪ್ರೀಂ ಕೋರ್ಟ್ ಅಸಹಾಯಕತೆ ವ್ಯಕ್ತಪಡಿಸಿದೆ. ಸೊಳ್ಳೆ ನಿರ್ಮೂಲನೆ ಸಂಬಂಧ ಸರ್ಕಾರಕ್ಕೆ ಸೂಚಿಸಬೇಕು ಎಂದು ಧಾನೇಶ್ ಲೆಶಧಾನ್ ಎಂಬುವವರು ಸುಪ್ರೀಂಗೆ ಮನವಿ ಮಾಡಿದ್ದರು.
ಅಂತೆಯೇ ವಿಚಾರಣೆ ಕೈಗೊಂಡ ಸುಪ್ರೀಂ ದ್ವಿಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿ, ಇದು ದೇವರಿಂದ ಮಾತ್ರ ಸಾಧ್ಯ. ನಾವು ದೇವರಲ್ಲ. ಆದ್ದರಿಂದ ನಮ್ಮನ್ನು ಈ ಬಗ್ಗೆ ಕೇಳಬೇಡಿ ಎಂದು ತಿಳಿಸಿದೆ. ದೇಶದಲ್ಲಿ ಸೊಳ್ಳೆ ನಿರ್ಮೂಲನೆ ಸಂಬಂಧ ಸರ್ಕಾರಕ್ಕೆ ಯಾವುದೇ ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ. ಏಕೆಂದರೆ ನಾವು ಪ್ರತಿಯೊಬ್ಬರ ಮನೆಗೆ ಹೋಗಿ ಸೊಳ್ಳೆ ನಿರ್ಮೂಲನೆ ಮಾಡುವುದು ಅಸಾಧ್ಯ. ಅರ್ಜಿದಾರರು ಕೇಳುತ್ತಿರುವುದನ್ನು ದೇವರು ಮಾತ್ರ ಮಾಡಲು ಸಾಧ್ಯ. ಆದ್ದರಿಂದ ನಮ್ಮನ್ನು ಕೇಳಬೇಡಿ ಎಂದು ಕೋರ್ಟ್ ಅಸಹಾಯಕತೆ ವ್ಯಕ್ತಪಡಿಸಿದೆ.
ಸೊಳ್ಳೆ ನಿರ್ಮೂಲನೆ ಸಂಬಂಧ ಸರ್ಕಾರಕ್ಕೆ ಏಕೀಕೃತ ನಿರ್ದೇಶನಗಳನ್ನು ನೀಡುವಂತೆ ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು. ಈ ಸಂಬಂಧ ಇದು ದೇವರಿಂದ ಮಾತ್ರ ಸಾಧ್ಯ ಎಂದು ನ್ಯಾಯಮೂರ್ತಿ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರ ಪೀಠ ತಿಳಿಸಿದೆ. ಸೊಳ್ಳೆಯಿಂದ ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಡೆಂಗ್ಯೂ ಸೇರಿದಂತೆ ಹಲವು ಮಹಾಮಾರಿ ರೋಗಗಳು ಬರುತ್ತಿದ್ದು, ಹಲವರು ಅದಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವಸಂಸ್ಥೆ ಕೂಡ ಸೊಳ್ಳೆ ನಿರ್ಮೂಲನೆಗೆ ಮುಂದಾಗಿದೆ. ಆದರೆ ಸೊಳ್ಳೆ ನಿರ್ಮೂಲನೆ ಅಸಾಧ್ಯ ಎಂದೂ ಕೂಡ ತಜ್ಞರು ಸಹ ಹೇಳಿದ್ದಾರೆ.