ಶ್ರೀದೇವಿ ಅಸಹಜ ಸಾವು; ತನಿಖೆ ಕೋರಿದ್ದ ಅರ್ಜಿ ವಜಾ
- ಶ್ರೀದೇವಿ ಸಾವು ಅಸಹಜವೆಂದು ತನಿಖೆಗೆ ಕೋರಿದ್ದ ಅರ್ಜಿ ವಜಾ
- ಶ್ರೀದೇವಿ ಹೆಸರಿನಲ್ಲಿ ದುಬೈಯಲ್ಲಿ ಮೃತಪಟ್ಟರೆ ಮಾತ್ರ ಹಣ ಸಿಗುವ ವಿಮೆ
- ದುಬೈ ಹೋಟೆಲ್ ಕೋಣೆಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ನಟಿ
ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ಸಾವು ಅಸಹಜ, ಆ ಬಗ್ಗೆ ಸ್ವತಂತ್ರ ತನಿಖೆಯಾಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಶ್ರೀದೇವಿ ಸಾವು ಪ್ರಕರಣದ ಸ್ವತಂತ್ರ ತನಿಖೆಯಾಗಬೇಕೆಂದು ಕೋರಿ ಸುನೀಲ್ ಸಿಂಗ್ ಎಂಬ ಚಿತ್ರ ನಿರ್ಮಾಪಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಮು.ನ್ಯಾ. ದೀಪಕ್ ಮಿಶ್ರಾ, ನ್ಯಾ. ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಅದನ್ನು ವಜಾಗೊಳಿಸಿದೆ.
ಯುಏಇಯಲ್ಲಿ ಮೃತಪಟ್ಟರೆ ಮಾತ್ರ ಹಣಸಂದಾಯವಾಗುವಂತಹ ವಿಮಾ ಪಾಲಿಸಿಗಳು ಶ್ರೀದೇವಿ ಹೆಸರಿನಲ್ಲಿತ್ತು. ಆಕೆ ಮೃತಪಟ್ಟಿರುವ ಸನ್ನಿವೇಶ ಅನುಮಾನಸ್ಪದವಾಗಿವೆ. ಆದುದರಿಂದ ಅದೊಂದು ಅಸಹಜ ಸಾವು ಆಗಿರುವ ಸಾಧ್ಯತೆಯಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಸುನೀಲ್ ಸಿಂಗ್ ಈ ಬಗ್ಗೆ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆಆ ಆರ್ಜಿಯನ್ನು ಮಾ.09ರಂದು ವಜಾಗೊಳಿಸಿತ್ತು.
ಭಾರತೀಯ ಹಾಗೂ ದುಬೈ ಅಧಿಕಾರಿಗಳು ಶ್ರೀದೇವಿ ಸಾವಿನ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದಾರೆ ಹಾಗೂ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಶ್ರೀದೇವಿ, 54, ಕಳೆದ ಫೆ.24ರಂದು ದುಬೈಯ ಖಾಸಗಿ ಹೋಟೆಲ್ ಕೋಣೆಯಲ್ಲಿ ಮೃತಪಟ್ಟಿದ್ದರು. ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಆಕೆ ಮೃತಪಟ್ಟಿದ್ದಾರೆಂದು ಮರಣೋತ್ತರ ವರದಿ ಹೇಳಿತ್ತು.