ಶಬರಿಮಲೆಯಲ್ಲಿ ಸಂಪ್ರದಾಯ ಉಳಿಸಲು ಭಕ್ತರಿಂದ ದೀಪ ಹೋರಾಟ
ಕೇರಳದಲ್ಲಿ 795 ಕಿ.ಮೀ ಉದ್ದದ ಅಯ್ಯಪ್ಪ ಜ್ಯೋತಿ | 40 ಲಕ್ಷ ಜನರಿಂದ ದೀಪ ಹಚ್ಚಿ ಅಯ್ಯಪ್ಪ ಮಂತ್ರ ಘೋಷಣೆ | ಶಬರಿಮಲೆಯಲ್ಲಿ ಸಂಪ್ರದಾಯ ಉಳಿಸಲು ಭಕ್ತರ ಹೋರಾಟ
ತಿರುವನಂತರಪುರ (ಡಿ. 27): ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕೆಂಬ ಆಶಯದೊಂದಿಗೆ ಕೇರಳದಲ್ಲಿ ಭುಧವಾರ ಬೃಹತ್ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಸರಗೋಡಿನ ಹೊಸಂಗಡಿಯಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸುಮಾರು 795 ಕಿ.ಮೀ ಉದ್ದದ ಜಾಗದಲ್ಲಿ ಜನ ಸಂಜೆ 6ರಿಂದ 6.30ರವರೆಗೆ ಜ್ಯೋತಿ ಬೆಳಗುವ ಮೂಲಕ ಅಯ್ಯಪ್ಪನ ಮಂತ್ರ ಜಪಿಸಿದರು. ಶಬರಿಮಲೆ ಕರ್ಮ ಸಮಿತಿ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿತ್ತು. 2019ರ ಜ.1ರಂದು ಕೇರಳ ಸರ್ಕಾರ ರಾಜ್ಯದುದ್ದಕ್ಕೂ ಮಹಿಳಾ ಗೋಡೆ ಕಾರ್ಯಕ್ರಮ ಆಯೋಜಿಸಿದೆ.
ಶಬರಿಮಲೆ ವಿವಾದದಿಂದ ತನ್ನ ಇಮೇಜ್ ಉಂಟಾದ ಧಕ್ಕೆ ಸರಿಪಡಿಸಲು ಎಂಬಂತೆ ಅದು ಈ ಕಾರ್ಯಕ್ರಮ ಆಯೋಜಿಸಿದೆ. ಅದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.