ಸಿಎಂ ಸಿದ್ದರಾಮಯ್ಯ ಅಣತಿ ಪ್ರಕಾರ ಶಶಿಕಲಾಗೆ ಜೈಲಲ್ಲಿ ಹಾಸಿಗೆ, ಮಂಚ!
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದಗಿಸಿರುವುದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ಇದೀಗ ಬಹಿರಂಗಗೊಂಡಿದೆ.
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದಗಿಸಿರುವುದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ಇದೀಗ ಬಹಿರಂಗಗೊಂಡಿದೆ.
ಶಶಿಕಲಾರಿಂದ ಲಂಚ ಸ್ವೀಕರಿಸಿರುವ ಆರೋಪ ಕುರಿತಾದ ಪ್ರಕರಣದಲ್ಲಿ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಸತ್ಯನಾರಾಯಣ ರಾವ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯೊಂದಿಗೆ ತಾವು ಈ ಪ್ರಕರಣದ ವಿಚಾರಣಾಧಿಕಾರಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಸಮಿತಿಯ ಮುಂದೆ ನೀಡಿದ್ದ ಹೇಳಿಕೆಯ ಕುರಿತ ವರದಿಯನ್ನೂ ಲಗತ್ತಿಸಿದ್ದಾರೆ.
ವಿನಯ್ ಕುಮಾರ್ ಅವರ ವಿಚಾರಣಾ ಸಮಿತಿ ಮುಂದೆ ಸತ್ಯನಾರಾಯಣ ರಾವ್ 2017ರ ಜುಲೈ 25ರಂದು ಹೇಳಿಕೆ ನೀಡಿದ್ದರು. ಅದರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಶಶಿಕಲಾ ಅವರಿಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ನೀಡಿರುವುದಾಗಿ ತಿಳಿಸಿದ್ದಾರೆ.
ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಕೋರ್ಟ್ಗೆ ಶರಣಾದ ನಂತರ ಆಕೆಯ ಪರ ವಕೀಲರು ಶಶಿಕಲಾಗೆ ಕ್ಲಾಸ್-1 ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು. ಈ ವಿಚಾರ ಸಂಬಂಧ ಮುಖ್ಯ ಅಧೀಕ್ಷಕರು ತಮಗೆ ಕರೆ ಮಾಡಿ ಈ ಸೌಲಭ್ಯ ನೀಡಬಹುದೇ ಎಂದು ಕೇಳಿದ್ದರು. ನಿಯಮಗಳ ಪ್ರಕಾರ ಇಂತಹ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ನಾನು ಸಲಹೆ ನೀಡಿದ್ದೆ. ಇದಾದ ನಂತರವೂ ಶಶಿಕಲಾ ಅವರು ಮತ್ತೆ ಹಲವು ಬಾರಿ ನನಗೆ ಲಿಖಿತವಾಗಿ ವಿಶೇಷ ಸೌಲಭ್ಯ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ನಾನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದೆ. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದಾದ ಕೆಲ ತಿಂಗಳ ನಂತರ ತಮ್ಮ ಆಪ್ತ ಸಹಾಯಕ ವೆಂಕಟೇಶ್ ಮೂಲಕ ನನ್ನನ್ನು ಕೆಪಿಸಿ ಅತಿಥಿ ಗೃಹಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಚ, ಹಾಸಿಗೆ ಹಾಗೂ ತಲೆದಿಂಬು ಒದಗಿಸಲು ಸೂಚಿಸಿದ್ದರು. ಇಂತಹ ಸೂಚನೆ ನೀಡಲು ಸರ್ಕಾರಕ್ಕೆ ಅಧಿಕಾರವಿದೆ. ಹೀಗಾಗಿ ನಾನು ಅದನ್ನು ಪಾಲಿಸಬೇಕಾಯಿತು ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಒಳಗೊಂಡಿರುವ ಸಮಿತಿಯ ವರದಿಯೂ ಸತ್ಯನಾರಾಯಣ ರಾವ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಭಾಗವಾಗಿದೆ.