ತಮಗೆ ಮೊಟ್ಟ ಮೊದಲ ಬಾರಿ ಅವಕಾಶ ನೀಡಿದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರನ್ನು ಮನೆಗೇ ಬರ ಮಾಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಕಡು ಕಷ್ಟದಿಂದ ಮೇಲೆದ್ದು ಬಂದ ಅನೇಕರು ಯಶಸ್ಸಿನ ಉತ್ತುಂಗಕ್ಕೆರುತ್ತಲೇ ಹಳೆಯದ್ದನ್ನೆಲ್ಲ ಮರೆತು ಮೆರೆದಾಡೋದೇ ಹೆಚ್ಚು. ಆದರೆ ಕೆಲವೇ ಕೆಲ ವ್ಯಕ್ತಿತ್ವಗಳು ಮಾತ್ರ ಕಷ್ಟಕಾಲದಲ್ಲಿ ನೆರವಾದವರನ್ನು ಯಾವತ್ತಿಗೂ ಮರೆಯುವುದಿಲ್ಲ. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ತಮ್ಮ ಮೊದಲ ಚಿತ್ರದ ನಿರ್ಮಾಪಕರನ್ನು ಮರೆಯದೇ, ನೆನೆದು ಕೃತಜ್ಞತೆ ಸಲ್ಲಿಸಿದವರು ಚಾಲೆಂಜಿಂಗ್ ಸ್ಟಾರ್ ದರ್ಶನ್!
ದರ್ಶನ್ ತಮ್ಮ ಐವತ್ತನೇ ಚಿತ್ರ ಕುರುಕ್ಷೇತ್ರದ ಮುಹೂರ್ತ ನಡೆದ ಖುಷಿಯಲ್ಲಿ ತಮಗೆ ಮೊಟ್ಟ ಮೊದಲ ಬಾರಿ ಅವಕಾಶ ನೀಡಿದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರನ್ನು ಮನೆಗೇ ಬರ ಮಾಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಎಂ.ಜಿ ರಾಮಮೂರ್ತಿ ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಪಕರು. ಈ ಹಿಂದೆ ದರ್ಶನ್ ಅವರಿಗೆ ಮೊದಲ ಸಲ ‘ಮೆಜೆಸ್ಟಿಕ್’ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದವರು. ದರ್ಶನ್ ಇದೀಗ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಅವರೀಗ ಸೂಪರ್ ಸ್ಟಾರ್. ಆದರೆ ತಮ್ಮ ಐವತ್ತನೇ ಚಿತ್ರ ಮುಹೂರ್ತ ಕಾಣುವ ಕ್ಷಣದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಆಗಿರುವ ಎಂ. ಜಿ. ರಾಮಮೂರ್ತಿಯವರನ್ನು ಸನ್ಮಾನಿಸಿದ ದರ್ಶನ್ ತಾವು ನಡೆದು ಬಂದ ಹಾದಿಯನ್ನು ಎಂದೂ ಮರೆಯೋದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ದರ್ಶನ್ ಅವರ ಮನೆಯಲ್ಲೇ ನಡೆದ ಈ ಸರಳ ಸನ್ಮಾನ ಸಮಾರಂಭದಲ್ಲಿ ದರ್ಶನ್ ಅವರ ಸಹೋದರ ದಿನಕರ್ ಕೂಡಾ ಹಾಜರಿದ್ದರು.?
(ಕನ್ನಡಪ್ರಭ ವಾರ್ತೆ)
