ನೋಟು ನಿಷೇಧದಿಂದ ಸರ್ಕಾರಕ್ಕೆ 6 ಸಾವಿರ ಕೋಟಿ ತೆರಿಗೆ ಲಾಭ
ಅಪನಗದೀಕರಣದ ಬಳಿಕ ಇಲ್ಲಿಯವರೆಗೆ ಸುಮಾರು 1,092 ಜನರು 50 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಟ್ಟಿದ್ದಾರೆ.
ನವದೆಹಲಿ(ಮಾ.19): ಅಪನಗದೀಕರಣದ ಬಳಿಕ ನಿಷೇಧಿತ ನೋಟುಗಳನ್ನು ಭಾರಿ ಪ್ರಮಾಣ ದಲ್ಲಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ ವ್ಯಕ್ತಿಗಳಿಂದ ಕೇಂದ್ರ 6 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ ಎಂದು ಕಪ್ಪು ಹಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ ಉಪಾಧ್ಯಕ್ಷ ನ್ಯಾ| ಅರಿಜಿತ್ ಪಸಾಯತ್ ತಿಳಿಸಿದ್ದಾರೆ.
ನೋಟು ನಿಷೇಧ ಬಳಿಕ ಸಾಕಷ್ಟುಮಂದಿ ಭಾರಿ ಪ್ರಮಾಣದಲ್ಲಿ ತಮ್ಮ ಹೆಸರಿನಲ್ಲಿರುವ ಅಥವಾ ಬೇರೊಬ್ಬರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿ ದ್ದರು. ಅಂತಹವರಿಗೆ ಇ-ಮೇಲ್, ಎಸ್ಎಂಎಸ್ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಹಲವರು ಸ್ವಯಂ ಘೋಷಣೆ ಯೋಜನೆಯಡಿ ತೆರಿಗೆ ಕಟ್ಟಲು ಮುಂದೆ ಬಂದಿದ್ದಾರೆ ಎಂದಿದ್ದಾರೆ.
ಅಪನಗದೀಕರಣದ ಬಳಿಕ ಇಲ್ಲಿಯವರೆಗೆ ಸುಮಾರು 1,092 ಜನರು 50 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಟ್ಟಿದ್ದಾರೆ. ಅವರಿಗೆ ಕಳೆದ ಮೂರು ವರ್ಷದ ವ್ಯವಹಾರದ ಬಗ್ಗೆ ಬ್ಯಾಲೆನ್ಸ್ ಶೀಟ್ ನೀಡಲು ಮಾಹಿತಿ ನೀಡಲು ನೋಟಿಸ್ ಕೊಡಲಾಗಿದೆ. ಆದರೆ ಇಲ್ಲಿಯವರೆಗೆ ಅವರಿಂದ ಯಾವುದೇ ಪ್ರತಿಕ್ರಿಯಿ ಬಂದಿಲ್ಲ. ತೆರಿಗೆ ವಂಚಿಸಿ ಹಣ ಠೇವಣಿಯಿಟ್ಟ ಪ್ರತಿಯೊಬ್ಬರು ತೆರಿಗೆ ಅಧಿಕಾರಿಗಳಿಂದ ವಿಚಾರಣೆ ಎದುರಿಸಲಿದ್ದಾರೆ ಎಂದು ಪಸಾಯತ್ ತಿಳಿಸಿದ್ದಾರೆ.