ಮುಂಗಾರು ಮುನ್ನವೇ ತುಂಬಿ ಹರಿಯುತ್ತಿದ್ದಾಳೆ ನೇತ್ರಾವತಿ!
ನೇತ್ರಾವತಿ ಈ ಬಾರಿ ಈಗಲೇ ತುಂಬಿ ಹರಿಯುತ್ತಿದ್ದಾಳೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬುವ ನದಿ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ತುಂಬಿ ಹರಿಯುತ್ತಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ತುಂಬಿರುವುದರಿಂದ ಅನೇಕ ನೀರಾವರಿ ಯೋಜನೆಗಳು ಮರು ಜೀವ ಪಡೆಯಲಿವೆ.
ಬಂಟ್ವಾಳ: ನೇತ್ರಾವತಿ ಈ ಬಾರಿ ಈಗಲೇ ತುಂಬಿ ಹರಿಯುತ್ತಿದ್ದಾಳೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬುವ ನದಿ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ತುಂಬಿ ಹರಿಯುತ್ತಿದ್ದಾಳೆ.
ಕಳೆದ ಎರಡು ವರ್ಷಗಳ ಹಿಂದೆ ಬೇಸಿಗೆಯಲ್ಲಿ ನೇತ್ರಾವತಿ ಬರಿದಾಗಿ ಇಡೀ ಜಿಲ್ಲಾ ಜನತೆ, ಅದರಲ್ಲಿಯೂ ಮಂಗಳೂರ ಜನರು ನೀರಿಲ್ಲದೆ ಪರದಾಡುವಂತೆ ಮಾಡಿದ್ದಳು. ಆದರೆ, ಈ ಬಾರಿ ಪ್ರಕೃತಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಫುಲ್ ಖುಷ್ ಆಗೋ ಥರ ಮಾಡಿದೆ.
ನೇತ್ರಾವತಿ ನದಿಯ ತುಂಬೆ ಡ್ಯಾಂನಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ 6 ಮೀ. ಮೀಟರ್ ನೀರು ಸಂಗ್ರಹವಾಗಿದೆ.
ಒಳ ಹರಿವೂ ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತಿದೆ. ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಈ ಬಾರಿ ಬೇಸಿಗೆಯಲ್ಲಿ 6 ಮೀಟರ್ ನೀರು ಸಂಗ್ರಹಿಸಿದ ಬಳಿಕ ಇದೇ ಮೊದಲ ಬಾರಿಗೆ ನೀರಿನ ಪ್ರಮಾಣ ಹೆಚ್ಚಾಗಿ, ನೀರನ್ನು ಹೊರಕ್ಕೆ ಹರಿಯ ಬಿಡಲಾಗಿದೆ. ಮೇ ತಿಂಗಳಾಂತ್ಯದಲ್ಲಿಯೇ 6 ಮೀಟರ್ ನೀರು ಸಂಗ್ರಹವಾದ ಕಾರಣ, ಅಂತರ್ಜಲ ಮಟ್ಟ ಹೆಚ್ಚಾಗುವ ಸಾಧ್ಯತೆ ಇದ್ದು, ನೀರಿನ ಸಮಸ್ಯೆ ಕಡಿಮೆಯಾಗುವ ಆಶಯವಿದೆ.
ಕಳೆದ ಎರಡು ವರ್ಷಗಳ ಹಿಂದೆ ಮೇ ಆರಂಭದಲ್ಲಿಯೇ ನೇತ್ರಾವತಿ ಬರಿದಾಗಿದ್ದಳು. ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹವಿಲ್ಲದೆ ಮಂಗಳೂರಿನ ಜನ ವಾರಕ್ಕೂ ಹೆಚ್ಚು ಕಾಲ ನೀರಿಗಾಗಿ ಹಪಹಪಿಸಬೇಕಾಯ್ತು. ಮಂಗಳೂರು ಜನರು ಕುಡಿಯುವ ನೀರಿಗಾಗಿ ಪಡಪಾರದ ಪಾಡು ಪಟ್ಟರು.
ಕುಡಿಯಲು ಹೊರತು ಪಡಿಸಿ, ಕೃಷಿ ಹಾಗೂ ಇತರೆ ಕಾರ್ಯಗಳಿಗೆ ನೀರು ಬಳಸಬಾರದೆಂದು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಷರತ್ತು ವಿಧಿಸಿತ್ತು. ಉದ್ದಿಮೆಗಳಿಗಂತೂ ನೀರು ಸಿಗುವುದು ಕಷ್ಟದ ಮಾತಾಗಿತ್ತು.
ಈ ವರ್ಷ ಈಗಲೇ 7 ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ನಿಂದ 6 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಿದೆ.
ಹೆಚ್ಚಿದೆ ನೀರಿನ ಒಳ ಹರಿವು
ಈಗ ಶಂಭೂರು ಎಎಂಆರ್ ಪವರ್ ಡ್ಯಾಂನಲ್ಲಿ ಮತ್ತು ತುಂಬೆ ಡ್ಯಾಂನಲ್ಲಿ ಶೇಖರಣೆಯಾದ ನೀರು ಹೊರತುಪಡಿಸಿ, ನೀರಿನ ಒಳಹರಿವು ಹೆಚ್ಚಾಗಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ನದಿ ತುಂಬಿರುವುದು ಪರಿಸರ ಪ್ರಿಯರಿಗೆ ಖುಷಿಯಾಗಿದೆ. ಜಿಲ್ಲೆಯ ಹಲವು ಯೋಜನೆಗಳು ನೇತ್ರಾವತಿ ನದಿ ನೀರನ್ನೇ ಆಶ್ರಯಿಸಿದ್ದು, ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ, ಎಂಆರ್ಪಿಎಲ್, ಎಎಂಆರ್ ಡ್ಯಾಂ, ಮಂಗಳೂರು ನಗರಕ್ಕೆ ಕುಡಿಯುವ ನೀರು ಮೊದಲಾದ ಯೋಜನೆಗಳ ಯಶಸ್ಸಿಗೆ ನೇತ್ರಾವತಿ ನದಿಯಲ್ಲಿ ನೀರು ತುಂಬಿರಬೇಕು. ಆ ಸಂತಸದ ಕ್ಷಣ ಈ ಬಾರಿ ಕೂಡಿ ಬಂದಿದೆ.
ಯಾವ ಕಾರಣಕ್ಕೂ 6 ಮೀಟರ್ಗಿಂತ ಹೆಚ್ಚು ಡ್ಯಾಂನಲ್ಲಿ ನೀರನ್ನು ನಿಲ್ಲಿಸುವುದಿಲ್ಲ. ಹೀಗಾಗಿ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ.
- ನಝೀರ್, ಮಂಗಳೂರು ನಗರ ಪಾಲಿಕೆ ಆಯುಕ್ತ
-ಮೌನೇಶ ವಿಶ್ವಕರ್ಮ