ನವದೆಹಲಿ (ಸೆ.14): ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ತಮಿಳುನಾಡಿನ ಕೆಲ ದೇವಾಲಯಗಳಲ್ಲಿ ಸುಮಾರು 500 ವರ್ಷಗಳಿಂದ ಆಚರಣೆಯಲ್ಲಿರುವ ಬ್ರಾಹ್ಮಣರ ಎಂಜಲೆಲೆ ಮೇಲೆ ದಲಿತರು ಉರುಳು ಸೇವೆ ಮಾಡುವ ಅನಿಷ್ಟ(ಮಡೆಸ್ನಾನ)ಪದ್ಧತಿಗೆ ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಅರಿಕೆ ಮಾಡಿದೆ. ಈ ಬಗ್ಗೆ ‘ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಾಹ್ಮಣರ ಸೇವಿಸಿ ಬಿಟ್ಟಎಂಜಲೆಲೆ ಮೇಲೆ ದಲಿತರು ಉರುಳು ಸೇವೆ ಮಾಡುವುದರಿಂದ ಚರ್ಮ ಕಾಯಿಲೆ ಮತ್ತು ದಾಂಪತ್ಯ ಜೀವನ ಸಮಸ್ಯೆ ಮತ್ತು ಬಂಜೆತನ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ, ಇದು ಅಮಾನವೀಯ ಮತ್ತು ಮೂಡನಂಬಿಕೆಯಾಗಿದ್ದು, ಇದರಿಂದ ವ್ಯಕ್ತಿಯ ಗೌರವಕ್ಕೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಾಮಾಜಿಕ ನ್ಯಾಯ ಖಾತೆ ಸಚಿವಾಲಯ ಅಭಿಪ್ರಾಯಪಟ್ಟಿದೆ. ಆದರೆ, ಇದು ಜಾತಿಯಾಧಾರಿತವಾಗಿರದ ಸ್ವಯಂಪ್ರೇರಿತವಾಗಿ ಈ ಆಚರಣೆ ಆಚರಿಸಲಾಗುತ್ತಿದೆ ಎಂದು ಕೆಲವರು ಮಡೆಸ್ನಾನ ಆಚರಣೆಯನ್ನು ಸಮರ್ಥಿಸುತ್ತಿದ್ದಾರೆ. ‘‘ಈ ಆಚರಣೆಗಳು ಸ್ವಯಂಪ್ರೇರಣೆಯಾಗಿ ಆಚರಿಸುತ್ತಿರಬಹುದು. ಆದರೆ, ವ್ಯಕ್ತಿಯ ಸಾಮಾಜಿಕ ಗೌರವಕ್ಕೆ ಧಕ್ಕೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಅನಿಷ್ಟಪದ್ಧತಿಗಳನ್ನು ಸಂವಿಧಾನದ ಪ್ರಕಾರ ತಪ್ಪು ಎಂದು ಸುಪ್ರೀಂ ಗೆ ಕೇಂದ್ರ ಸಲ್ಲಿಸಿದ ಅಫಿಡೇವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.