ಕೇರಳಕ್ಕೆ ಇಂದು ಮುಂಗಾರು ಪ್ರವೇಶ ಮಾಡಲಿದೆ. ಬಿಸಿಲ ಬೇಗೆ ತಲ್ಲಣಿಸಿದ್ದ ನಾಡಿಗೆ ತಂಪೆರೆಯಲು ವರುಣ ಸಜ್ಜಾಗಿದ್ದಾನೆ. ಇದರ ನಡುವೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ನವದೆಹಲಿ: ದೇಶದ ಕೃಷಿ ಚಟುವಟಿಕೆ, ಆರ್ಥಿಕತೆಯ ಬೆನ್ನೆಲುಬಾಗಿರುವ ಮುಂಗಾರು ಮಾರುತಗಳು, ಶನಿವಾರ ಅಧಿಕೃತವಾಗಿ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕರಾವಳಿಯ ಕೆಲ ಭಾಗಗಳಲ್ಲಿ ಶನಿವಾರ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಜೊತೆಗೆ ಕರ್ನಾಟಕದ ಕರಾವಳಿಯ ಕೆಲ ಭಾಗಗಳಲ್ಲೂ ಮಳೆಯಾಗಬಹುದು ಎಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಕೋಜಿಕ್ಕೋಡ್, ತಿರುವನಂತಪುರ, ಆಲಪ್ಪುಳ, ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌ ನೀಡಲಾಗಿದ್ದು, ಎಚ್ಚರದಿಂದ ಇರುವಂತೆ ಕೇರಳದ ಹವಾಮಾನ ಇಲಾಖೆ ಸೂಚಿಸಿದೆ. ಈ ನಾಲ್ಕೂ ಜಿಲ್ಲೆಗಳಲ್ಲಿ ಮುಂದಿನ 2 ದಿನ ಸಾಮಾನ್ಯದಿಂದ, ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂಗಾರು ಮಾರುತಗಳ ಶನಿವಾರ ಕೇರಳವನ್ನು ಪ್ರವೇಶ ಮಾಡಿದರೂ, ಭಾರೀ ಬಿಸಿಲಿನ ಹೊಡೆತಕ್ಕೆ ಸಿಕ್ಕಿರುವ ದೇಶದ ಮಧ್ಯಭಾಗ ಮತ್ತು ಪಶ್ಚಿಮ ಭಾಗವನ್ನು ತಲುಪಲು ಇನ್ನೂ 7 ದಿನ ಬೇಕಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಜೂನ್‌ ಆರಂಭಕ್ಕೇ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡುತ್ತವೆಯಾದರೂ, ಈ ಬಾರಿ ಒಂದು ವಾರ ವಿಳಂಬವಾಗಲಿದೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಹೇಳಿತ್ತು.