ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿದ್ದ ಜೆಡಿಎಸ್ ಶಾಸಕರು ಈಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಇಂದು ಸಿಎಂ ಜೊತೆ ನಡೆಯುವ ಸಭೆಯಲ್ಲಿ ನಿರ್ಧಾರ ಅಂತಿಮವಾಗಲಿದ್ದು, ಎನ್ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದ ಕಾರಣ ಕಾಂಗ್ರೆಸ್ ಸೇರುವ ಬೆಳವಣಿಗೆ ಚುರುಕು ಪಡೆದಿದೆ.
ಬೆಂಗಳೂರು(ಜ.28): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿದ್ದ ಜೆಡಿಎಸ್ ಶಾಸಕರು ಈಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಇಂದು ಸಿಎಂ ಜೊತೆ ನಡೆಯುವ ಸಭೆಯಲ್ಲಿ ನಿರ್ಧಾರ ಅಂತಿಮವಾಗಲಿದ್ದು, ಎನ್ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದ ಕಾರಣ ಕಾಂಗ್ರೆಸ್ ಸೇರುವ ಬೆಳವಣಿಗೆ ಚುರುಕು ಪಡೆದಿದೆ.
ರಾಜ್ಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಅಮಾನತುಗೊಂಡಿರುವ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಕಾತುರರಾಗಿದ್ದಾರೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ 7 ಶಾಸಕರು ಕೈ ಹಿಡಿಯುವ ನಿರ್ಧಾರ ಅಂತಿಮಗೊಳ್ಳಲಿದೆ. ಕಾಂಗ್ರೆಸ್ ಸೇರುವ ಬಗ್ಗೆ ನಿಮ್ಮ ನಿರ್ಧಾರ ಸ್ಪಷ್ಟಪಡಿಸಿ ಎಂದು 7 ಜನ ಶಾಸಕರಿಗೆ ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದು, ಕಾಂಗ್ರೆಸ್ ಸೇರ್ಪಡೆಯಾದ್ರೆ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಸ್ಪಷ್ಟಪಡಿಸಿಕೊಳ್ಳುವಂತೆಯೂ ಶಾಸಕರಿಗೆ ಸಿಎಂ ಸಲಹೆ ಮಾಡಿದ್ದಾರೆ.
ಇನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿ ಏಳೂ ಜನರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಮುಂದೆ ಪಟ್ಟು ಹಿಡಿದಿದ್ದಾರೆ. ಆದ್ರೆ ಕಾಂಗ್ರೆಸ್ ಕಡೆಯಿಂದ ಶಾಸಕರಾದ ಜಮೀರ್ ಅಹಮದ್, ಬಾಲಕೃಷ್ಣ, ಭೀಮಾನಾಯ್ಕ್, ರಮೇಶ್ ಬಂಡಿಸಿದ್ದೇಗೌಡ, ಅವರಿಗೆ ಟಿಕೆಟ್ ನೀಡುವ ಬಗ್ಗೆ ಒಪ್ಪಿಗೆ ಇದ್ದು, ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ ಮತ್ತು ಪುಟ್ಟಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಲೆಕ್ಕಾಚಾರ ನಡೆದಿದೆ.
ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಕಾಲ ಇದ್ದರೂ ಕಾಂಗ್ರೆಸ್ನಲ್ಲಿ ಟಿಕೆಟ್ ಖಚಿತಪಡಿಸಿಕೊಳ್ಳಲು ಈಗ ರೆಬೆಲ್ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಅದಲ್ಲದೇ ಕಾಂಗ್ರೆಸ್ ಸೇರಲು ಕಾತುರತೆ ವ್ಯಕ್ತಪಡಿಸಲು ಎನ್ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದಿದ್ದೇ ಕಾರಣ. ಹೀಗಾಗಿ ತಮ್ಮ ಬೆಂಬಲಿಗರ ವಿಶ್ವಾಸ ಉಳಿಸಿಕೊಳ್ಳಲು, ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ನಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಕಿರಣ್ ಹನಿಯಡ್ಕ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್.
