ರಾಜ್ಯದಲ್ಲಿ ಅತೃಪ್ತರ ಸಂಖ್ಯೆ ಬೆಳೆಯುತ್ತಿದ್ದು, ರಾಜೀನಾಮೆ ಮುಂದುವರಿದಿದೆ. ಇದೇ ವೇಳೆ ಇಬ್ಬರು ಅತೃಪ್ತ ನಾಯಕರ ಮನ ಒಲಿಸಲು ಕೈ ನಾಯಕರು ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು [ಜು.12] : ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹಾಗೂ ರೋಷನ್‌ ಬೇಗ್‌ ಅವರ ಮನವೊಲಿಸುವ ಉದ್ದೇಶದಿಂದ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅವರು ತಮ್ಮ ಈ ಉದ್ದೇಶ ಸಾಧನೆಯಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

"

ಗುಲಾಂ ನಬಿ ಆಜಾದ್‌ ಅವರ ಮನವೊಲಿಕೆ ಪರಿಣಾಮವಾಗಿ ರಾಮಲಿಂಗಾರೆಡ್ಡಿ ಹಾಗೂ ಬೇಗ್‌ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್‌ ವಲಯಗಳು ನಂಬಿವೆ. ಈ ಮನವೊಲಿಕೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್‌ ಅವರು ಗುರುವಾರ ಸಂಜೆ ದೆಹಲಿಗೆ ಹಿಂತಿರುಗಿದ್ದು, ಶನಿವಾರ ನಗರಕ್ಕೆ ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜಕೀಯ ಹೈ ಡ್ರಾಮಾ

ರಾಮಲಿಂಗಾರೆಡ್ಡಿ ಹಾಗೂ ಬೇಗ್‌ ಅವರೊಂದಿಗೆ ಸತತ ಸಭೆಗಳನ್ನು ನಡೆಸಿದ ಗುಲಾಂ ನಬಿ ಆಜಾದ್‌ ಅವರು ಈ ಇಬ್ಬರು ನಾಯಕರ ಮನವೊಲಿಸಿದ್ದಾರೆ ಎನ್ನಲಾಗಿದೆ. ಬೇಗ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಅವರು ಕೆಪಿಸಿಸಿ ಅಧ್ಯಕ್ಷರಿಗೂ ಸೂಚಿಸಿದ್ದು, ಶೀಘ್ರವೇ ಕೆಪಿಸಿಸಿ ಅಮಾನತು ಆದೇಶವನ್ನು ಹಿಂಪಡೆಯಲಿದೆ ಎನ್ನಲಾಗಿದೆ.

ಅದೇ ರೀತಿ ರಾಮಲಿಂಗಾರೆಡ್ಡಿ ಅವರ ಮನವೊಲಿಕೆಯೂ ಯಶಸ್ವಿಯಾಗಿದ್ದು, ಇದರ ಪರಿಣಾಮವಾಗಿ ರಾಜೀನಾಮೆ ನೀಡಲು ಮುಂದಾಗಿದ್ದ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು ತಮ್ಮ ನಿರ್ಧಾರ ಹಿಂಪಡೆದಿದ್ದು, ಶುಕ್ರವಾರ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.