ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಇರೋ ಪ್ರಾಬ್ಲಂ ಆದ್ರೂ ಏನು?
ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇಬ್ಬರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಬಾರೀ ಕುತೂಹಲ ಮೂಡಿಸಿತ್ತು. ಅಷ್ಟಕ್ಕೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಕಾರಣವೇನು?
ಬೆಂಗಳೂರು (ಸೆ. 11): ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಫೈಟ್ ರಾಜ್ಯ ರಾಜಕಾರಣದಲ್ಲಿ ಬಾರೀ ಕುತೂಹಲ ಮೂಡಿಸಿತ್ತು. ಇವರಿಬ್ಬರ ನಡುವಿನ ರಾಜಕೀಯ ಕದನಕ್ಕೆ ಕಾರಣಗಳೇನು? ಇಲ್ಲಿದೆ ಕಾರಣ.
ರಮೇಶ್ಗೂ ಲಕ್ಷ್ಮಿಗೂ ಏನು ಪ್ರಾಬ್ಲಂ?
ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಒಂದು ವಾರದ ನಂತರ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟಾಗಿಯೇ ದೆಹಲಿಗೆ ಬಂದರಂತೆ. ಆದರೆ ಒಂದು ದಿನ ನಾಯಕರ ಮನೆಗಳಿಗೆ ಎಡತಾಕಿದ ನಂತರ ಸಂಜೆ ರಮೇಶ್ರನ್ನು ಭೇಟಿಯಾಗಲು ಬಂದ ಲಕ್ಷ್ಮಿ, ನಿಮ್ಮ ಬಗ್ಗೆ ಬಹಳ ನೆಗೆಟಿವ್ ಇದೆ. ಇಲ್ಲಿನವರು ತರಾತುರಿಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿಬಿಟ್ಟಾರು.
ನೀವು ನಾಳೆ ಬೆಳಿಗ್ಗೆ ಗುಲಾಂ ನಬಿ ಸಾಹೇಬರು ಮತ್ತು ಅಹ್ಮದ್ ಪಟೇಲ್ ಬಳಿಗೆ ಹೋಗಿ ಬೆಳಗಾವಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ರನ್ನು ಮಂತ್ರಿ ಮಾಡಲು ಹೇಳಿ, ಡಿ.ಕೆ.ಶಿವಕುಮಾರ್ ಕೂಡ ಓಡಾಡುತ್ತಾರೆ ಎಂದರಂತೆ. ಇದನ್ನು ಕೇಳಿ ಉರಿದುಹೋದ ರಮೇಶ್, ನಾನೇ ಬೆಳೆಸಿದ ನೀನು ಇವತ್ತು ನನ್ನ ವಿರುದ್ಧವೇ ಆಟ ಆಡುತ್ತೀಯಾ? ಸೀದಾ ಬೆಳಗಾವಿಗೆ ಹೋಗು, ಇಲ್ಲಿ ಕಾಣಿಸಿಕೊಳ್ಳಬೇಡ ಎಂದು ತಮ್ಮ ಗೋಕಾಕ್ ಸಾಹುಕಾರ ಶೈಲಿಯಲ್ಲಿ ಲಕ್ಷ್ಮೀ ಮೇಲೆ ರೇಗಿದರಂತೆ.
ಅಲ್ಲಿಂದ ಎದ್ದುಹೋದ ಲಕ್ಷ್ಮೀ ಮುಂದೆ 5 ದಿನ ತನ್ನನ್ನೇ ಮಂತ್ರಿ ಮಾಡಿ ಎಂದು ನಾಯಕರ ಮನೆಗಳಿಗೆ ಎಡತಾಕಿದ್ದೇ ತಾಕಿದ್ದು. ಮುಂದೆ ಈ ವಿಷಯವೇ ರಮೇಶ್ ಮತ್ತು ಸತೀಶ್ರನ್ನು ಒಂದಾಗಿಸಿ, ಲಕ್ಷ್ಮಿ ಮೇಲೆ ಹರಿಹಾಯುವಂತೆ ಮಾಡಿ, ಸರ್ಕಾರದ ಒಂದು ಕೈ ನೋಡಿಯೇಬಿಡೋಣ ಎಂಬಲ್ಲಿಯವರೆಗೆ ಹೋಗಿ ತಲುಪಿದೆ.
ದಿಲ್ಲಿಯಲ್ಲಿ ಲಕ್ಷ್ಮೀ ಪ್ರಭಾವ
ಅನೇಕರು ಲಕ್ಷ್ಮಿ ಹೆಬ್ಬಾಳ್ಕರ್ ಹಿಂದೆ ಗಾಡ್ಫಾದರ್ ಆಗಿ ಇರುವವರು ಡಿ.ಕೆ.ಶಿವಕುಮಾರ್ ಒಬ್ಬರೇ ಎಂದು ಹೇಳುತ್ತಾರೆ. ಆದರೆ 2018 ರ ವಿಧಾನಸಭಾ ಚುನಾವಣೆಗೂ ಮೊದಲು ವಿಧಾನಸಭೆಗೆ ಟಿಕೆಟ್ ಕೊಡುವುದು ಖಾತ್ರಿಯಾಗಿ ಲಕ್ಷ್ಮಿಯನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪರಮೇಶ್ವರ್ ತೆಗೆಯಲು ಹೊರಟಾಗ ಸಿದ್ದು, ಖರ್ಗೆ, ಗುಲಾಂ ನಬಿ ಆಜಾದ್ ಕೂಡ ಲಕ್ಷ್ಮಿಯನ್ನು ತೆಗೆಯಬೇಡಿ ಎಂದು ರಾಹುಲ್ ಎದುರೇ ಹೇಳಿದರಂತೆ.
2008 ರಲ್ಲಿ ಜನತಾದಳದಿಂದ ಎಂ.ಪಿ.ಪ್ರಕಾಶ್ ಕಾಂಗ್ರೆಸ್ಗೆ ಸೇರಲು ತಮ್ಮ ಬೆಂಬಲಿಗರೊಂದಿಗೆ ದಿಲ್ಲಿಯ ಸೌತ್ ಅವೆನ್ಯೂದಲ್ಲಿರುವ ಗುಲಾಂ ನಬಿ ಆಜಾದ್ ಮನೆಗೆ ಬಂದು ಬರೋಬ್ಬರಿ ಒಂದು ಗಂಟೆ ಹೊರಗಡೆ ಲಾನ್ ಮೇಲೆ ಕಾಯುತ್ತಾ ಕುಳಿತಿದ್ದರು. ನಂತರ ನೋಡಿದರೆ ಗುಲಾಂ ನಬಿಯವರ ಕಚೇರಿಯಿಂದ ಲಕ್ಷ್ಮಿ ಹೊರಗಡೆ ಬಂದರು. ಅವರಿಗಾಗಿ ಎಂ.ಪಿ. ಪ್ರಕಾಶ್ರನ್ನು ಗುಲಾಂ ನಬಿ ಒಂದು ಗಂಟೆ ಕಾಯಿಸಿದ್ದರು. ಇಷ್ಟೆಲ್ಲ ದಿಲ್ಲಿ-ಬೆಂಗಳೂರು ಕನೆಕ್ಷನ್ ಇರುವ ಲಕ್ಷ್ಮಿ ಮೇಡಂ ಜಾರಕಿಹೊಳಿ ಮುಷ್ಟಿಯಲ್ಲಿ ಇರುತ್ತಾರೆಯೇ?
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ