Asianet Suvarna News Asianet Suvarna News

ಹೋಂಗಾರ್ಡ್ ಜತೆ ಪ್ರತಿಭಾ ಹಂತಕನ ಲವ್! ?

ಜೈಲಿನಲ್ಲಿ ಪ್ರೇಮ, ಅನಾರೋಗ್ಯದ ನೆಪದಲ್ಲಿ ಹೊರ ಬಂದು ವಿಹಾರ | ಹೋಂ ಗಾರ್ಡ್ ಮೊಬೈಲ್‌ನಲ್ಲಿದ್ದ ಫೋಟೋದಿಂದ ಬೆಳಕಿಗೆ

Rape Convict in Love With Home Guard

ಬೆಂಗಳೂರು: ಇತ್ತೀಚಿಗೆ ತಮಿಳುನಾಡಿನ ರಾಜಕೀಯ ನಾಯಕಿ ಶಶಿಕಲಾ ಅವರಿಗೆ ‘ವಿಐಪಿ’ ಸೌಲಭ್ಯ ಕಲ್ಪಿಸಿದ ಕಾರಣಕ್ಕೆ ತೀವ್ರ ವಿವಾದಕ್ಕೀಡಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು, ಇದೀಗ ಸಜಾ ಕೈದಿ ಮತ್ತು ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರ ನಡುವಿನ ಪ್ರೇಮ ಪುರಾಣ ಬೆಳಕಿಗೆ ಬಂದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ, ಕ್ಯಾಬ್ ಚಾಲಕ ಶಿವಕುಮಾರ್ ಹಾಗೂ ಕಾರಾಗೃಹದ ಭದ್ರತೆಗೆ ನಿಯೋಜಿತವಾಗಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ನಡುವಣ ಪ್ರೇಮ ಪ್ರಕರಣ ಇದಾಗಿದ್ದು, ಅನಾರೋಗ್ಯದ ನೆಪದಲ್ಲಿ ಜೈಲಿನಿಂದ ಹೊರಬಂದು ತನ್ನ ಪ್ರಿಯತಮೆ ಜತೆ ಆತ ನಗರದಲ್ಲಿ ವಿಹರಿಸಿದ್ದ ಎಂಬ ಮಾತುಗಳು ಕೇಳಿ ಬಂದಿವೆ.

ಅಲ್ಲದೆ ಈ ಆರೋಪಗಳಿಗೆ ಪೂರಕವಾಗಿ ತನ್ನ ಪ್ರಿಯತಮೆ ಎನ್ನಲಾದ ಗೃಹ ರಕ್ಷಕ ದಳದ ಸಿಬ್ಬಂದಿ ಜತೆ ಶಿವಕುಮಾರ್ ತೆಗೆಸಿಕೊಂಡಿರುವ ಸೆಲ್ಫಿ ಪೋಟೋ ಬಹಿರಂಗವಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಮ: ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರು, ‘ನನಗೆ ಕೈದಿ ಶಿವಕುಮಾರ್ ಹಾಗೂ ಗೃಹ ರಕ್ಷಕದ ಸಿಬ್ಬಂದಿ ನಡುವಿನ ಪ್ರೇಮ ಪ್ರಕರಣದ ಕುರಿತು ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ನಾನು ಮುಖ್ಯ ಅಧೀಕ್ಷಕನಾಗಿ ಕಾರಾಗೃಹಕ್ಕೆ ನೇಮಕಗೊಂಡ (ಮೂರು ತಿಂಗಳ ಹಿಂದೆ) ನಂತರ ಶಿವಕುಮಾರ್‌ನನ್ನು ಕಾರಾಗೃಹದಿಂದ ಹೊರಗೆ ಕಳುಹಿಸಿಲ್ಲ. ಇದಕ್ಕೂ ಮುನ್ನ ನಡೆದಿರುವ ಬೆಳವಣಿಗೆಗಳ ಕುರಿತ ವಿಷಯ ಗೊತ್ತಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರೇಮಾಂಕುರವಾಗಿದ್ದು ಹೇಗೆ?: 2005ರಲ್ಲಿ ನಡೆದಿದ್ದ ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ರಾಷ್ಟ್ರದ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಂಪನಿಗೆ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದ ಪ್ರತಿಭಾ ಅವರನ್ನು ಆ ಕಂಪನಿ ಕ್ಯಾಬ್ ಚಾಲಕ ಶಿವಕುಮಾರ್ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಆತನಿಗೆ ಎಸಿಎಂಎಂ ನ್ಯಾಯಾಲಯವು ಜೀವಾವಧಿ

ಶಿಕ್ಷೆ ವಿಧಿಸಿತ್ತು. ಕಳೆದ 12 ವರ್ಷಗಳಿಂದ ಜೈಲಿನಲ್ಲಿರುವ ಶಿವಕುಮಾರ್, ತನ್ನ ನಡವಳಿಕೆ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದ. ಹಾಗಾಗಿ ಸಜಾ ಕೈದಿ ಆದ ನಂತರ ಆತನಿಗೆ ಕಾರಾಗೃಹದ ಆವರಣದಲ್ಲಿ ಕಚೇರಿ ಕೆಲಸಗಳಿಗೆ ಅಧಿಕಾರಿಗಳು ನೇಮಿಸಿದ್ದರು. ಈ ವೇಳೆ ಅವನಿಗೆ ಅಲ್ಲಿ ಭದ್ರತೆ ನಿಯೋಜಿತವಾಗಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಪರಿಚಯವಾಗಿದೆ.

ವಿಧೇಯತೆ ನಾಟಕವಾಡಿ ಹಿರಿಯ ಅಧಿಕಾರಿಗಳ ವಿಶ್ವಾಸ ಸಂಪಾದಿಸಿದ್ದ ಶಿವಕುಮಾರ್, ಇದನ್ನೇ ಬಳಸಿಕೊಂಡು ಕಾರಾಗೃಹದೊಳಗೆ ಆಯಕಟ್ಟಿನಲ್ಲಿ ಪ್ರದೇಶಗಳಿಗೆ ಕೆಲಸಕ್ಕೆ ಅವನು ನಿಯುಕ್ತಿಗೊಳ್ಳುತ್ತಿದ್ದ. ಹಾಗೆಲ್ಲ ತನ್ನ ಗೆಳೆತಿಯನ್ನು ಸಹ ಅದೇ ಸ್ಥಳದ ಭದ್ರತೆಗೆ ನಿಯೋಜನೆಗೊಳ್ಳುವಂತೆ ಅವನು ಲಾಬಿ ನಡೆಸಿದ್ದ.

ಈ ಗೆಳೆತನವು ಕ್ರಮೇಣ ಅವರಲ್ಲಿ ಪ್ರೇಮವಾಗಿದೆ ಎಂದು ಮೂಲಗಳು ಹೇಳಿವೆ. ಆನಂತರ ಅನಾರೋಗ್ಯದ ನೆಪದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದ ಶಿವಕುಮಾರ್, ಆ ವೇಳೆಗೆ ಆಸ್ಪತ್ರೆಗೆ ತನ್ನ ಪ್ರಿಯತಮೆಯನ್ನು ಕರೆಸಿಕೊಳ್ಳುತ್ತಿದ್ದ. ಆಗ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ, ಪ್ರೇಯಸಿ ಜತೆ ನಗರದಲ್ಲಿ ವಿಹಾರಕ್ಕೆ ಅವನು ಹೋಗುತ್ತಿದ್ದ. ಹೋಟೆಲ್-ಲಾಡ್ಜ್‌ಗಳಲ್ಲಿ ಅವರಿಬ್ಬರು ‘ಸಮಯ’ ಕಳೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಪ್ರೇಮ ಪ್ರಕರಣ ಬೆಳಕಿಗೆ ಬಂದಿದ್ದು  ಹೀಗೆ

ಕೆಲ ದಿನಗಳ ಹಿಂದೆ ಶಿವಕುಮಾರ್ ಪ್ರೇಯಸಿ ಎನ್ನಲಾದ ಗೃಹ ರಕ್ಷಕ ದಳ ಸಿಬ್ಬಂದಿಯ ಮೊಬೈಲ್ ಆಕೆಯ ಸಹೋದ್ಯೋಗಿ ಕೈಗೆ ಸಿಕ್ಕಿದೆ. ಆ ವೇಳೆ ಅವರು, ಮೊಬೈಲ್ ಪರಿಶೀಲಿಸುವಾಗ ಶಿವಕುಮಾರ್ ಜೊತೆಗಿನ ಫೋಟೋ ಕಣ್ಣಿಗೆ ಬಿದ್ದಿದೆ. ಕೂಡಲೇ ಆ ಫೋಟೋವನ್ನು ಶಿವಕುಮಾರ್ ಪ್ರಿಯತಮೆಗೆ ಗೊತ್ತಾಗದಂತೆ ತನ್ನ ಮೊಬೈಲ್‌ಗೆ ಆಕೆ ಕಳುಹಿಸಿಕೊಂಡಿದ್ದಾಳೆ. ಇದಾದ ನಂತರ ಆ ವಿವಾದಿತ ಚಿತ್ರವು ಒಬ್ಬರಿಂದ ಮತ್ತೊಬ್ಬರಿಗೆ ಕಾರಾಗೃಹ ಇಲಾಖೆಯೊಳಗೆ ಗೌಪ್ಯವಾಗಿ ಹರಡಿದೆ ಎನ್ನಲಾಗಿದೆ.

 

Follow Us:
Download App:
  • android
  • ios