ಒಂದು ರಾಜ್ಯದ ರಾಜ್ಯಪಾಲರಾಗಿದ್ದ ರಾಮನಾಥ್ ಅವರು ಮನಸು ಮಾಡಿದ್ದರೆ ಅಲ್ಲಿಯೇ ಯಾರಿಗಾದರೂ ಫೋನ್ ಕಾಲ್ ಮಾಡಿ ಪ್ರವೇಶ ಗಿಟ್ಟಿಸಬಹುದಿತ್ತು. ಆದರೆ, ಅವರು ಹಾಗೆ ಮಾಡದೇ ವಾಪಸ್ಸು ಹೋಗುತ್ತಾರೆ.

ನವದೆಹಲಿ(ಜೂನ್ 20): ಭಾವೀ ರಾಷ್ಟ್ರಪತಿ ಹಾಗೂ ಬಿಹಾರದ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರಿಗೆ ಶಿಮ್ಲಾದಲ್ಲಿರುವ ರಾಷ್ಟ್ರಪತಿ ವಿಶ್ರಾಂತಿಗೃಹ(Presidential Retreat)ಕ್ಕೆ ಪ್ರವೇಶ ಸಿಗದೇ ಹೋದ ಘಟನೆ ಕಳೆದ ತಿಂಗಳು ನಡೆದದ್ದು ಬೆಳಕಿಗೆ ಬಂದಿದೆ. ರಾಷ್ಟ್ರಪತಿಯವರ ಬಂಗಲೆ ಪ್ರವೇಶಿಸಲು ಬೇಕಾಗಿದ್ದ ಅಧಿಕೃತ ಅನುಮತಿ ಪತ್ರ ರಾಮನಾಥ್ ಕೋವಿಂದ್ ಬಳಿ ಇರಲಿಲ್ಲವಾದ್ದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಶಿಮ್ಲಾದಿಂದ 15 ಕಿಮೀ ದೂರದಲ್ಲಿರುವ ಮಶೋಬ್ರಾದಲ್ಲಿರುವ ಈ ಸ್ಥಳಕ್ಕೆ ಕೋವಿಂದ್ ಮೇ 28ರಂದು ಭೇಟಿ ನೀಡಿದ್ದರು. ಬಿಹಾರ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ತಮ್ಮ ಕುಟುಂಬದೊಂದಿಗೆ ಪ್ರವಾಸ ಹೊರಟಿದ್ದರು. ಅವರಿಗೆ ರಾಷ್ಟ್ರಪತಿಯವರ ವಿಹಾರತಾಣವನ್ನು ನೋಡುವ ಅಭಿಲಾಷೆ ಹೊಂದಿದ್ದರು. ಆದರೆ, ಭಾರೀ ಬಿಗಿಭದ್ರತೆ ಇರುವ ಈ ಸ್ಥಳಕ್ಕೆ ಅಧಿಕೃತ ಅನುಮತಿ ಪತ್ರ ಬೇಕೆಂಬ ಮಾಹಿತಿ ಅವರಿಗೆ ತಿಳಿದಿರಲಿಲ್ಲವೆನ್ನಲಾಗಿದೆ. ಒಂದು ರಾಜ್ಯದ ರಾಜ್ಯಪಾಲರಾಗಿದ್ದ ರಾಮನಾಥ್ ಅವರು ಮನಸು ಮಾಡಿದ್ದರೆ ಅಲ್ಲಿಯೇ ಯಾರಿಗಾದರೂ ಫೋನ್ ಕಾಲ್ ಮಾಡಿ ಪ್ರವೇಶ ಗಿಟ್ಟಿಸಬಹುದಿತ್ತು. ಆದರೆ, ಅವರು ಹಾಗೆ ಮಾಡದೇ ವಾಪಸ್ಸು ಹೋಗುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಶಿಮ್ಲಾದಲ್ಲಿರುವ ಪ್ರಾಕೃತಿಕ ಸೌಂದರ್ಯವು ರಾಮನಾಥ್ ಕೋವಿಂದ್ ಅವರನ್ನು ತುಂಬಾ ಸೆಳೆದಿದೆ. ಇಲ್ಲಿರುವ ಪರಿಸರ ಸಮತೋಲನ ಕಾಪಾಡಲು ಎಲ್ಲಾ ಸರಕಾರಗಳು ಸತತವಾಗಿ ಶ್ರಮಿಸಿವೆ ಎಂದು ಪಕ್ಷಭೇದ ಮರೆತು ಎಲ್ಲರನ್ನೂ ಕೋವಿಂದ್ ಶ್ಲಾಘಿಸಿದರಂತೆ.

ಸರಳ ಜೀವನಕ್ಕೆ ಹೆಸರಾದ ರಾಮನಾಥ್ ಕೋವಿಂದ್ ಅವರು ಭಾವೀ ರಾಷ್ಟ್ರಪತಿ ಎನಿಸಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಎನ್'ಡಿಎ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದು ಕೆಲವೇ ದಿನಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ರಾಮನಾಥ್ ಕೋವಿಂದ್ ಅವರು ಗೆಲ್ಲುವುದು ಬಹುತೇಕ ಖಚಿತವಾಗಿದೆ.

ರಾಷ್ಟ್ರಪತಿ ವಿಹಾರತಾಣದ ವಿಶೇಷತೆ ಏನು?
ಭಾರತದ ರಾಷ್ಟ್ರಪತಿಗಳು ಬೇಸಿಗೆಯಲ್ಲಿ ವಿಹಾರಕ್ಕಾಗಿ ಮಶೋಬ್ರಾಗೆ ಹೋಗುತ್ತಾರೆ. ಚಳಿಗಾಲದಲ್ಲಿ ಹೈದರಾಬಾದ್'ಗೆ ಹೋಗುತ್ತಾರೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿರುವ ಇವೆರಡು ಪ್ರದೇಶಗಳನ್ನು ವಿಹಾರಕ್ಕಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಿಕೊಂಡಿರುವುದು ದೇಶದ ಐಕ್ಯತೆಯ ಸಂಕೇತದಂತಿದೆ. ದೇಶದ ಎಲ್ಲಾ ಭಾಗವೂ ರಾಷ್ಟ್ರಪತಿಯವರಿಗೆ ಸಮಾನ ಎಂಬ ಭಾವನೆ ಅದಲ್ಲಿದೆ. ಇಲ್ಲಿಗೆ ರಾಷ್ಟ್ರಪತಿ ಭೇಟಿ ಕೊಟ್ಟಾಗ ಅವರ ಜೊತೆ ಕುಟುಂಬ ಮತ್ತು ಕಚೇರಿ ಸಿಬ್ಬಂದಿ ಕೂಡ ಇಲ್ಲಿಗೆ ವರ್ಗವಾಗುತ್ತವೆ.