ಮಂಗಳವಾರ ಬೆಳಗ್ಗೆ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ರಾಷ್ಟ್ರಪತಿಗಳಿಗೆ ಮೀಸಲಾದ ಸಶಸ್ತ್ರ ಪಡೆಗಳು ಅವರನ್ನು ಸಕಲ ಗೌರವದೊಂದಿಗೆ ಬರಮಾಡಿಕೊಳ್ಳುತ್ತವೆ. ನಂತರ ನಿಯೋಜಿತ ರಾಷ್ಟ್ರಪತಿ ಹಾಗೂ ನಿರ್ಗಮಿತ ರಾಷ್ಟ್ರಪತಿಗಳು ಒಂದೇ ಕಾರಿನಲ್ಲಿ ಬೆಂಗಾವಲು ಪಡೆಯೊಂದಿಗೆ ಸಂಸತ್ತಿಗೆ ಆಗಮಿಸುತ್ತಾರೆ. ಇಬ್ಬರನ್ನೂ ಎರಡೂ ಸದನಗಳ ಮುಖ್ಯಸ್ಥರಾದ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಸಭಾಪತಿಗಳು ಆತ್ಮೀಯವಾಗಿ ಸ್ವಾಗತಿಸಿ ಸಂಸತ್ತಿನ ಸೆಂಟ್ರಲ್ ಹಾಲ್‌ಗೆ ಕರೆದೊಯ್ಯುತ್ತಾರೆ.
ನವದೆಹಲಿ(ಜು.25): ದೇಶದ 14ನೇ ರಾಷ್ಟ್ರಪತಿಯಾಗಿ ಬಿಹಾರದ ಮಾಜಿ ರಾಜ್ಯಪಾಲ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೋವಿಂದ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಗೌಪ್ಯತಾ ವಿಧಿ ಬೋಧಿಸಲಿದ್ದಾರೆ. ಈ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ದೇಶದ ರಾಯಭಾರಿಗಳು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಧಿಕಾರ ಸ್ವೀಕಾರ ಹೇಗೆ?
ಮಂಗಳವಾರ ಬೆಳಗ್ಗೆ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ರಾಷ್ಟ್ರಪತಿಗಳಿಗೆ ಮೀಸಲಾದ ಸಶಸ್ತ್ರ ಪಡೆಗಳು ಅವರನ್ನು ಸಕಲ ಗೌರವದೊಂದಿಗೆ ಬರಮಾಡಿಕೊಳ್ಳುತ್ತವೆ. ನಂತರ ನಿಯೋಜಿತ ರಾಷ್ಟ್ರಪತಿ ಹಾಗೂ ನಿರ್ಗಮಿತ ರಾಷ್ಟ್ರಪತಿಗಳು ಒಂದೇ ಕಾರಿನಲ್ಲಿ ಬೆಂಗಾವಲು ಪಡೆಯೊಂದಿಗೆ ಸಂಸತ್ತಿಗೆ ಆಗಮಿಸುತ್ತಾರೆ. ಇಬ್ಬರನ್ನೂ ಎರಡೂ ಸದನಗಳ ಮುಖ್ಯಸ್ಥರಾದ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಸಭಾಪತಿಗಳು ಆತ್ಮೀಯವಾಗಿ ಸ್ವಾಗತಿಸಿ ಸಂಸತ್ತಿನ ಸೆಂಟ್ರಲ್ ಹಾಲ್ಗೆ ಕರೆದೊಯ್ಯುತ್ತಾರೆ.
ಪ್ರಮಾಣ ವಚನ ಸ್ವೀಕಾರ ಹಾಗೂ ಭಾಷಣದ ಬಳಿಕ 21 ಕುಶಾಲತೋಪು ಸಿಡಿಸಿ ನೂತನ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ. ನಂತರ ಕೋವಿಂದ್ ಅವರನ್ನು ರಾಷ್ಟ್ರಪತಿಗಳ ಅಧಿಕೃತ ಅಂಗರಕ್ಷಕರು ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನಕ್ಕೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
