ಮೋದಿ ಪ್ರಮಾಣ ವಚನಕ್ಕೆ ರಜನಿ, ಕಮಲ್?
ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳು ಚಿತ್ರರಂಗದ ಪ್ರಸಿದ್ಧ ಗಣ್ಯರನ್ನು ಆಹ್ವಾನಿಸಲಾಗಿದೆ.
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳು ಚಿತ್ರರಂಗದ ಪ್ರಸಿದ್ಧ ನಟರಾದ ರಜನೀಕಾಂತ್ ಹಾಗೂ ಕಮಲ್ಹಾಸನ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರೂ ನಟರು ಸಮಾರಂಭದಲ್ಲಿ ಭಾಗವಹಿಸುತ್ತಾರಾ ಎಂಬುದು ಖಚಿತಗೊಂಡಿಲ್ಲ. ರಜನೀಕಾಂತ್ ಅವರು ತಮ್ಮದೇ ಆದ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ಕಮಲ್ಹಾಸನ್ ಅವರು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೋಲಿನ ಕಹಿ ಉಂಡಿದ್ದಾರೆ. ಚೆನ್ನೈಗೆ ಬಂದಾಗ ಮೋದಿ ಅವರನ್ನು ರಜನಿ ಭೇಟಿ ಮಾಡಿದ್ದರು. ಇತ್ತೀಚೆಗೆ ಕಮಲ್ ಹಾಸನ್ ಅವರು ಹೇಳಿಕೆಯೊಂದನ್ನು ನೀಡಿ ದೇಶದ ಮೊದಲ ಉಗ್ರ ಹಿಂದು, ಅದು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.