ಮನೆ ಬಿಟ್ಟು ಓಡಿ ಹೋಗುವ ಜೋಡಿಗೆ ಸಿಗುತ್ತೆ ಆಶ್ರಯ ಮನೆ!
ಪೋಷಕರ ಆಶಯಕ್ಕೆ ವಿರುದ್ಧವಾಗಿ ಮನೆಬಿಟ್ಟು ಓಡಿ ಹೋಗಿ ಮದುವೆ ಆಗುವ ಜೋಡಿಗಳ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.
ಬಿಕಾನೇರ್[ಜ.21]: ತಮ್ಮ ಪೋಷಕರ ಆಶಯಕ್ಕೆ ವಿರುದ್ಧವಾಗಿ ಮನೆಬಿಟ್ಟು ಓಡಿ ಹೋಗಿ ಮದುವೆ ಆಗುವ ಜೋಡಿಗಳ ರಕ್ಷಣೆಗೆ ಆಶ್ರಯಗತಾಣ ತೆರೆಯಲು ರಾಜಸ್ಥಾನ ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ ಈ ಜೋಡಿಗಳಿಗೆ ತಕ್ಷಣವೇ ನೆರವಾಗಲು ಸಹಾಯವಾಣಿಯೊಂದು ಆರಂಭವಾಗಲಿದೆ. ಒಂದು ವೇಳೆ ಪ್ರೇಮಿಗಳು ತಮಗೆ ಯಾರಿಂದಾದರೂ ಅಪಾಯವಿದೆ ಎಂದು ತಿಳಿದುಬಂದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.
ಜೀವ ಭಯದಿಂದ ಮನೆ ಬಿಟ್ಟು ಓಡಿ ಹೋಗುವ ನವ ವಿವಾಹಿತ ಜೋಡಿಗಳಿಗೆ ರಕ್ಷಣೆ ನೀಡುವಂತೆ ರಾಜಸ್ಥಾನ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ವಿಸ್ತೃತ ಯೋಜನೆ ರೂಪಿಸಲಾಗಿದೆ. ನವ ಜೋಡಿಗಳಿಗೆ ನೆರವಾಗಲು ನೋಡಲ್ ಅಧಿಕಾರಿಯಾಗಿ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಾ ನಿರ್ದೇಶಕ ಜಗ್ನಾ ಸಿಂಗ್ ಶ್ರೀನಿವಾಸ್ ರಾವ್ ಹೇಳಿದ್ದಾರೆ.