ಚುನಾವಣೆ ಸಂದರ್ಭದಲ್ಲಿಯೇ 9 ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಜೈಪುರ, (ನ.26): ರಾಜಸ್ಥಾನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ 9 ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಪಕ್ಷದಿಂದ ಟಿಕೆಟ್ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ರಾಜಸ್ಥಾನ ರಾಜ್ಯ ಕಾಂಗ್ರೆಸ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಇಂತಹ ನಿರ್ಧಾರ ಕೈಗೊಂಡಿರುವುದು ಕೆಲ ನಾಯಕರಿಗೆ ಬೇಸರ ಮೂಡಿಸಿದೆ. ಚುನಾವಣೆ ಹೊಸ್ತಿಲಲ್ಲಿ ಇಂತಹ ಕ್ರಮ ಪಕ್ಷದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎನ್ನುವುದು ಕೆಲ ನಾಯಕರ ಅಭಿಪ್ರಾಯವಾಗಿದೆ.
ಪಕ್ಷದ ವಕ್ತಾರ ಸಚಿನ್ ಪೈಲಟ್ ಪ್ರತಿಕ್ರಿಯಿಸಿ, ಮಾಜಿ ಕೇಂದ್ರ ಸಚಿವ ಮಹಾದೇವ್ ಸಿಂಗ್ ಖಂಡೇಲಾ, ಮಾಜಿ ಶಾಸಕ ಸನ್ಯಮ್ ಲೋಧಾ, ನಾತು ರಾಮ್ ಸಿನೋದಿಯಾ, ನಾವಲ್ ಕಿಶೋರ್ ಮೀನಾ, ಖುಶ್ವೀರ್ ಸಿಂಗ್, ಸೋಹನ್ ನಾಯಕ್, ಸಿಎಸ್ ಬೈದ್, ಮೇಶ್ ಚಾಂದ್ ಖಂಡೇವಾರ ಮತ್ತು ರಮೇಶ್ ಖಿಂಚಿಯನ್ನು ಉಚ್ಚಾಟಿಸಲಾಗಿದೆ.
ಈ ನಾಯಕರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.
200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಇದೇ ಡಿಸೆಂಬರ್. 7ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿ. 11 ರಂದು ಮತ ಏಣಿಕೆ ನಡೆಯಲಿದೆ.
