ಬೆಂಗಳೂರಿನ ಆರ್‌‌ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಸಹ ಕಣದಲ್ಲಿದ್ದರು. ನಿರೀಕ್ಷೆಯಂತೆ ಠೇವಣಿ ಕಳೆದುಕೊಂಡಿದ್ದರೂ, ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೇಗೆ?

ಬೆಂಗಳೂರು: ಅಕ್ರಮ ಮತ ಚೀಟಿ ಸಂಗ್ರಹ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 28ಕ್ಕೆ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರದ ಚುನಾವಣಾ ಫಲಿತಾಂಶ ಮೇ 31ಕ್ಕೆ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸುಮಾರು 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಆದರೆ, ಕಣದಲ್ಲಿ ಹುಚ್ಚ ವೆಂಕಟ್ ಗಳಿಸಿದ ಮತವೆಷ್ಟು ಗೊತ್ತಾ?

Add Asianetnews Kannada as a Preferred SourcegooglePreferred

'ನಾನು ದೇಶದ ಪ್ರಧಾನಿ' ಆಗುತ್ತೇನೆಂದು ಆರ್‌ಆರ್‌ ನಗರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ನಟ, ನಿರ್ದೇಶಕ, ಬಿಗ್‌ ಬಾಸ್ ಸ್ಪರ್ಧಿ ಹುಚ್ಚ ವೆಂಕಟ್ ಹೇಳಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ನಿರೀಕ್ಷೆಯಂತೆ ಇವರು ಠೇವಣಿ ಕಳೆದುಕೊಂಡಿದ್ದಾರೆ. ಆದರೆ, ಅಲ್ಲಿಯೂ ಒಂದು ದಾಖಲೆ ನಿರ್ಮಿಸಿದ್ದಾರೆ!

ಕಣದಲ್ಲಿದ್ದ 14 ಪಕ್ಷೇತರರ ಪೈಕಿ ಹುಚ್ಚ ವೆಂಕಟ್ ಅತ್ಯಧಿಕವೆಂದರೆ 764 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ಅತಿ ಹೆಚ್ಚು ಮತಗಳನ್ನು ಹುಚ್ಚು ವೆಂಕಟ್ ಪಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. 

ಮುನಿರತ್ನ ಅವರು ಕ್ಷೇತ್ರದಲ್ಲಿ ಮತ ಪಡೆಯಲು ಕುಕ್ಕರ್, ಸೀರೆ ಹಂಚಿ ಆಮಿಷ ತೋರುತ್ತಿದ್ದಾರೆಂದೂ ಪ್ರಚಾರದ ವೇಳೆ ವೆಂಕಟ್ ಆರೋಪಿಸಿದ್ದರು. 'ನಾನು ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರಿಗೆ ಯಾವುದೇ ಆಮಿಷಗಳನ್ನು ತೋರಿಸಿರಲಿಲ್ಲ. ಇದೀಗ ಸೋತಿದ್ದೇವೆ. ಪ್ರಾಮಾಣಿಕನನ್ನು ಮತದಾರರು ಸೋಲಿಸಿದ್ದಾರೆ,' ಎಂದು ಸೋಲಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.