ರೈಲ್ವೆ ಕ್ಲೇಮುಗಳ ಮೇಲ್ಮನವಿ ಪ್ರಾಧಿಕಾರ (ಆರ್‌ಸಿಟಿ)ಗಳು ಒಟ್ಟು 41 ವಿಧಗಳಲ್ಲಿರುವ ಗಾಯಗಳ ಬಗ್ಗೆ ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.

ನವದೆಹಲಿ(ಡಿ.27): ಇನ್ನು ಮುಂದೆ ರೈಲು ಅಪಘಾತದಲ್ಲಿ ಅಸುನೀಗಿದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರದ ಮೊತ್ತವನ್ನು ದುಪ್ಪಟ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇದು ವರೆಗೆ ರೈಲ್ವೇ ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಇನ್ನುಮುಂದೆ ಸಂತ್ರಸ್ತರ ಕುಟುಂಬಕ್ಕೆ ₹8 ಲಕ್ಷ ಪರಿಹಾರ ಸಿಗಲಿದೆ. ಜನವರಿಯಿಂದ ಈ ಪರಿಷ್ಕೃತ ನಿಯಮ ಅನ್ವಯವಾಗಲಿದೆ ಎಂದು ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಜತೆಗೆ ಗಂಭೀರ ಪ್ರಮಾಣದಲ್ಲಿ ಅಂಗಾಗ ಊನವಾದರೆ, ಅಪಘಾತದಲ್ಲಿ ಮುಖಕ್ಕೆ ಗಂಭೀರವಾಗಿ ಗಾಯವಾದರೂ ಪರಿಹಾರದ ಮೊತ್ತವನ್ನು ಹಾಲಿ ₹4 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಡಿ.22ರಂದು ಹೊರಡಿಸಲಾಗಿರುವ ಅಧಿಸೂಚನೆ ಪ್ರಕಾರ ಅಪಘಾತಗಳಿಂದ ಉಂಟಾಗಿರುವ ತೊಂದರೆಗೆ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗಿದೆ.

ರೈಲ್ವೆ ಕ್ಲೇಮುಗಳ ಮೇಲ್ಮನವಿ ಪ್ರಾಧಿಕಾರ (ಆರ್‌ಸಿಟಿ)ಗಳು ಒಟ್ಟು 41 ವಿಧಗಳಲ್ಲಿರುವ ಗಾಯಗಳ ಬಗ್ಗೆ ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ರೈಲ್ವೆ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟಲ್ಲಿ ಅರ್ಜಿಯ ವಿಚಾರಣೆ ವೇಳೆ ಮೊತ್ತವನ್ನು ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕೆಂದು ಆದೇಶ ನೀಡಿತ್ತು. ಬದಲಾಗುತ್ತಿರುವ ಮಾರುಕಟ್ಟೆ ಬೆಲೆ, ಹಣದ ಮೌಲ್ಯಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಆದೇಶಿಸಿತ್ತು.