ಗುಜರಾತ್ ಸೋಲು ಕಲಿಸಿದ ಅನುಭವದ ಆಧಾರದ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಯಾವ ರೀತಿ ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸುದೀರ್ಘ ಪಾಠ ಮಾಡಿದ್ದಾರೆ. 

ನವದೆಹಲಿ (ಜ.14): ಗುಜರಾತ್ ಸೋಲು ಕಲಿಸಿದ ಅನುಭವದ ಆಧಾರದ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಯಾವ ರೀತಿ ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸುದೀರ್ಘ ಪಾಠ ಮಾಡಿ ದ್ದಾರೆ. ಗುಜರಾತ್ ವೈಫಲ್ಯ ಮರುಕಳಿಸಿದಂತೆ ಮಾಡಲು ಕರ್ನಾಟಕದಲ್ಲಿ ಬೂತ್ ಮಟ್ಟದ ಸಮಿತಿ ಗಳನ್ನು ಸದೃಢಗೊಳಿಸಲು ಕಟ್ಟು ನಿಟ್ಟಿನ ಕ್ರಮ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೆ, ಚುನಾವಣೆಯಲ್ಲಿ ಗೆಲ್ಲಲು ‘ಸಪ್ತ ಸೂತ್ರದ ಮಂತ್ರ’ ಬೋಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕೆಪಿ ಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದ ರಾಜ್ಯ ನಾಯಕರ ತಂಡದೊಂದಿಗೆ ದಿಲ್ಲಿಯಲ್ಲಿ ಶನಿವಾರ ಮೂರು ಗಂಟೆಗಳ ಸುದೀರ್ಘ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ಗುಜರಾತ್ ಸೋಲಿನ ಪ್ರಮುಖ ಕಾರಣಗಳನ್ನು ಅವಲೋಕಿಸಿದರು.

ಗುಜರಾತ್ ಚುನಾವಣೆಯಲ್ಲಿನ ತಮ್ಮ ಪಕ್ಷದ ತಪ್ಪುಗಳು ಕರ್ನಾಟಕ ಚುನಾವಣೆಯಲ್ಲಿ ಮರುಕಳಿಸಬಾರದು. ಶತಾಯಗತಾಯ ಕರ್ನಾಟಕ ಚುನಾವಣೆ ಗೆಲ್ಲಲು ಬೂತ್ ಮಟ್ಟದ ಸಮಿತಿಗಳನ್ನು ಕಡ್ಡಾಯವಾಗಿ ಬಲಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೂತ್ ಸಮಿತಿ ಸದೃಢತೆ: ಬೂತ್ ಮಟ್ಟದ ಸಮಿತಿಗಳನ್ನು ಸದೃಢವಾಗಿ ರಚಿಸಲು ವಿಫಲವಾಗಿದ್ದೇ ಗುಜರಾತ್ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ. ಗುಜರಾತ್ ಸಾರ್ವಜನಿಕರು ಮೋದಿ ಆಡಳಿತದಿಂದ ಬೇಸತ್ತಿದ್ದರು. ಕಾಂಗ್ರೆಸ್‌ಗೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದರೂ, ಅವರನ್ನು ಒಟ್ಟು ಗೂಡಿಸಿ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸಲು ವಿಫಲವಾಗಿದ್ದೆವು. ಇಂತಹ ತಪ್ಪು ಮರುಕಳಿಸಬಾರದು ಎಂದರು.

ಹಿಂದುಗಳ ಭಾವನೆಗೆ ಬೇಡ ಧಕ್ಕೆ: ರಾಜ್ಯ ಕಾಂಗ್ರೆಸ್ ಮುಖಂಡರಿಂದ ಯಾವುದೇ ಕಾರಣಕ್ಕೂ ಹಿಂದುಗಳ ಭಾವನೆಗೆ ಧಕ್ಕೆ ಆಗಬಾರದು. ರಾಜ್ಯ ಸರ್ಕಾರವು ಬಿಜೆಪಿಯು ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವಂತಹ ಆಡಳಿತ ವೈಫಲ್ಯ ಮಾಡಿಲ್ಲ. ಹೀಗಾಗಿ ಹಿಂದುತ್ವ ಹೆಸರಿನಲ್ಲಿ ಭಾವನಾತ್ಮಕವಾಗಿ ಚುನಾವಣೆ ಎದುರಿಸಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿ ಹಿಂದುತ್ವದ ವಿಚಾರದಲ್ಲಿ ಹೇಳಿಕೆ ಕೊಡುವಾಗ ಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂದುಗಳ ಭಾವನೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು. 

ಸಿದ್ದು ಕ್ಯಾಪ್ಟನ್: ಸಿದ್ದರಾಮಯ್ಯ ನಾಯಕತ್ವದಲ್ಲಿ ಎಲ್ಲರೂ ಒಟ್ಟಾಗಿ ಚುನಾವಣೆಗೆ ಹೋಗುವಂತೆ ಸೂಚನೆ ನೀಡಿದ ರಾಹುಲ್, ಸಿಎಂ ವಿರುದ್ಧ ಬಿಜೆಪಿ ಟೀಕಿಸಿದರೆ ಉಳಿದೆಲ್ಲಾ ನಾಯಕರು ರಕ್ಷಣೆಗೆ ಬರಬೇಕು. ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರವು ಸಂಪನ್ಮೂಲ ಕ್ರೋಡೀಕರಣ ಹಾಗೂ ಹಂಚಿಕೆಗೆ ಅಡ್ಡಿಯಾಗಬಹುದು. ಹೀಗಾಗಿ ಇಂತಹ ಕೆಲಸಗಳನ್ನು ವ್ಯವಸ್ಥಿತವಾಗಿ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.