Asianet Suvarna News Asianet Suvarna News

ಉಡುಪಿ, ಮಂಗಳೂರಿನಲ್ಲಿ ಮತ್ತೆ ರಾಹುಲ್‌ ಯಾತ್ರೆ

ಬಿಜೆಪಿ ಜನಸುರಕ್ಷಾ ಯಾತ್ರೆ ಬೆನ್ನಲ್ಲೇ ಕರಾವಳಿ ಜಿಲ್ಲೆಗಳಲ್ಲಿ ಈಗ ಕಾಂಗ್ರೆಸ್‌ ಯಾತ್ರೆಗೆ ಸಿದ್ಧತೆ ನಡೆದಿದ್ದು, ಮಾ.20ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದ ಜನಾಶೀರ್ವಾದ ಯಾತ್ರೆ ನಿಗದಿಯಾಗಿದೆ. ಕೇವಲ ಒಂದು ದಿನ ಮಾತ್ರ ಸಂಚರಿಸುವ ಯಾತ್ರೆಯು, ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇನ್ನಷ್ಟುಚೈತನ್ಯ ತುಂಬುವ ನಿರೀಕ್ಷೆ ಇದೆ.

Rahul Gandhi Visit Karnataka

ಮಂಗಳೂರು : ಬಿಜೆಪಿ ಜನಸುರಕ್ಷಾ ಯಾತ್ರೆ ಬೆನ್ನಲ್ಲೇ ಕರಾವಳಿ ಜಿಲ್ಲೆಗಳಲ್ಲಿ ಈಗ ಕಾಂಗ್ರೆಸ್‌ ಯಾತ್ರೆಗೆ ಸಿದ್ಧತೆ ನಡೆದಿದ್ದು, ಮಾ.20ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದ ಜನಾಶೀರ್ವಾದ ಯಾತ್ರೆ ನಿಗದಿಯಾಗಿದೆ. ಕೇವಲ ಒಂದು ದಿನ ಮಾತ್ರ ಸಂಚರಿಸುವ ಯಾತ್ರೆಯು, ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇನ್ನಷ್ಟುಚೈತನ್ಯ ತುಂಬುವ ನಿರೀಕ್ಷೆ ಇದೆ.

ಅಧಿಕೃತ ಮಾಹಿತಿ ಪ್ರಕಾರ, ಮಾ.20ರಂದು ಬೆಳಗ್ಗೆ ಹಾಸನದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಹುಲ್‌ ಗಾಂಧಿ ಅವರು ಕುಂದಾಪುರಕ್ಕೆ ಆಗಮಿಸಲಿದ್ದು, ಬೆಳಗ್ಗೆ 10 ಗಂಟೆಗೆ ಕುಂದಾಪುರ ಅಥವಾ ಬೈಂದೂರಿನಲ್ಲಿ ವಿಶೇಷ ಬಸ್‌ನಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದ್ದಾರೆ. ಬಳಿಕ ಉಡುಪಿ, ಕಾಪು ಮೂಲಕ ಮೂಲ್ಕಿ ಪ್ರವೇಶಿಸಲಿದ್ದು, ಮೂಲ್ಕಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಯಾತ್ರೆಗೆ ಸ್ವಾಗತ ಕೋರಲಾಗುತ್ತದೆ. ಅಲ್ಲಿಂದ ಸುರತ್ಕಲ್‌ಗೆ ಆಗಮಿಸಿ ಕಾರ್ನರ್‌ ಸಭೆ ನಡೆಸಲಿದೆ. ಈ ಸ್ಥಳಗಳಲ್ಲೆಲ್ಲ ರಾಹುಲ್‌ಗಾಂಧಿ ಒಂದೆರಡು ನಿಮಿಷ ಮಾತನಾಡಲಿದ್ದಾರೆ. ಬಳಿಕ ನಂತೂರು, ಪಂಪ್‌ವೆಲ್‌, ಕಂಕನಾಡಿ, ಜ್ಯೋತಿ ವೃತ್ತ ಮೂಲಕ ಮಂಗಳೂರಿನ ನೆಹರೂ ಮೈದಾನ ತಲುಪಲಿದೆ. ಸಂಜೆ 4 ಗಂಟೆಗೆ ನೆಹರೂ ಮೈದಾನದಲ್ಲಿ ಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ.

ಸಕ್ರ್ಯೂಟ್‌ ಹೌಸ್‌ನಲ್ಲಿ ವಾಸ್ತವ್ಯ?:

ಮಾ.20ರಂದು ಜನಾಶೀರ್ವಾದ ಯಾತ್ರೆಯ ಸಮಾರೋಪ ಮಂಗಳೂರಿನಲ್ಲಿ ನಡೆಯುವುದರಿಂದ ಅಂದು ರಾತ್ರಿ ರಾಹುಲ್‌ಗಾಂಧಿ ಅವರು ಮಂಗಳೂರಿನ ಸಕ್ರ್ಯೂಟ್‌ ಹೌಸ್‌ನಲ್ಲಿ ತಂಗಲಿದ್ದಾರೆ. ಅಲ್ಲಿಂದ ಮಾ.21ರಂದು ಚಿಕ್ಕಮಗಳೂರಿಗೆ ಪ್ರಯಾಣಿಸಲಿದ್ದು, ಬಳಿಕ ಮಾ.24 ಮತ್ತು 25ರಂದು ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದ್ದಾರೆ ಎನ್ನಲಾಗಿದೆ.

ಏಪ್ರಿಲ್‌ನಲ್ಲಿ ಮತ್ತೆ ರಾಹುಲ್‌ ಜಿಲ್ಲೆಗೆ?

ಈ ಬಾರಿ ಕೇವಲ ಒಂದು ದಿನದ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರಾಹುಲ್‌ಗಾಂಧಿ ಅವರು ಏಪ್ರಿಲ್‌ನಲ್ಲಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2ನೇ ಸುತ್ತಿನ ಪ್ರವಾಸ ನಡೆಸಲಿದ್ದಾರೆ. ಈ ವೇಳೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್‌, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಪಾಲ್ಗೊಳ್ಳಲಿದ್ದಾರೆ. ಯಾತ್ರೆಯ ಮಾರ್ಗ ಮಧ್ಯೆ ರಾಹುಲ್‌ಗಾಂಧಿ ದೇವಸ್ಥಾನ, ಮಸೀದಿ ಹಾಗೂ ಚಚ್‌ರ್‍ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಈ ಬಗ್ಗೆ ರೂಪುರೇಷೆ ಇನ್ನೂ ಅಂತಿಮಗೊಂಡಿಲ್ಲ. ಜೊತೆಗೆ ಕಾಲೇಜು ವಿದ್ಯಾರ್ಥಿಗಳು, ರೈತರೊಂದಿಗೆ ಸಂವಾದ ಏರ್ಪಡಿಸಲು ಉದ್ದೇಶಿಸಿದ್ದರೂ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

Follow Us:
Download App:
  • android
  • ios